ಕಕ್ಕೇರಾ: 40ಕ್ಕೂ ಹೆಚ್ಚು ಮಹಿಳೆಯರನ್ನು ತುಂಬಿಕೊಂಡು ಹೋಗುತ್ತಿದ್ದ ಪಿಕಪ್ ವಾಹನವೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯರ ಕಾಲು ಮುರಿದಿವೆ.
ಗುರುವಾರ ಬೆಳಿಗ್ಗೆ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಘಟನೆ ನೆಡೆದಿದೆ.
40ಕ್ಕೂ ಹೆಚ್ಚು ಮಹಿಳೆಯರು ಪಿಕಪ್ ವಾಹನದ ಮೇಲೆ, ಒಳಗೆ ಕುಳಿತುಕೊಂಡು ಮೆಣಸಿನಕಾಯಿ ಬಿಡಿಸಲು ಯಾಳಗಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಉದ್ದದ ಕಬ್ಬಿಣದ ಪೈಪ್ಗಳನ್ನು ಹೇರಿಕೊಂಡು ನಿಂತಿದ್ದ ಲಾರಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪಿಕಪ್ ವಾಹನದ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಿಕಪ್ ವಾಹನ ವೀರಘಟ್ಟ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಘಟನೆ ನಡೆದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ದೇವದುರ್ಗ ತಾಲೂಕಿನ ಬಂಡೆಬಾವಿ ಗ್ರಾಮದ ತಿಮ್ಮಮ್ಮ(17) ಅವರ ಎಡಗಾಲಿನ ಪಾದದ ಎಲುಬುಗಳು ಕಟ್ಟಾಗಿವೆ. ಸುರಪುರ ತಾಲ್ಲೂಕಿನ ಬಂಡೊಳ್ಳಿ ಗ್ರಾಮದ ಅಂಬಿಕಾ ಮೇಟಿ (16) ಅವರ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಇಬ್ಬರಿಗೂ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕ್ರಮಕ್ಕೆ ಆಗ್ರಹ: ಕೂಲಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಬರುವ ಕಾರ್ಮಿಕರನ್ನು ತಮ್ಮ ವಾಹನದಲ್ಲಿ ಮಿತಿ ಮೀರಿ ತುಂಬಿಕೊಂಡು ಅವರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಸಾರಿಗೆ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಮುಖಂಡ ಚಂದ್ರು ವಜ್ಜಲ್, ಬುಚ್ಚಪ್ಪನಾಯಕ, ಅಯುಬ್, ಸಂಗಣ್ಣ ಹಡಗಲ್, ಸೋಮು ಬನದೊಡ್ಡಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.