ಶಹಾಪುರ/ವಡಗೇರಾ: ನಾರಾಯಣಪೂರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುವ ಸೇತುವೆ ಶುಕ್ರವಾರ ಮುಳಗಡೆಯಾಗಿದೆ. ಇದರಿಂದ ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿ ಬಂದ್ ಆಗಿರುವುದರಿಂದ ಸಾರಿಗೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ದೇವದುರ್ಗ ತಾಲ್ಲೂಕಿಗೆ ತೆರಳಬೇಕಾದರೆ ಸುರಪುರ ತಾಲ್ಲೂಕಿನ ತಿಂಥಣಿ ಸೇತುವೆ ಮೂಲಕ 45 ಕಿ.ಮೀ ಸುತ್ತುವರೆದು ಸಾಗಬೇಕು. ಅಲ್ಲದೇ ಗೂಗಲ್ ಬ್ಯಾರೇಜ್ ಮೂಲಕ ಸಾಗಬೇಕಾಗಿದೆ ಎಂದು ಶಹಾಪುರ ಸಾರಿಗೆ ಅಧಿಕಾರಿ ತಿಳಿಸಿದರು.
ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳು ಹಾಗೂ ನದಿಯ ಎಡ ಮತ್ತು ಬಲ ಭಾಗದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗೆ ನೀರು ನುಗ್ಗಿವೆ. ಕುಡಿಯುವ ನೀರು ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ನದಿ ಪಾತ್ರದ ಜನತೆಗೆ ಕಾಡುತ್ತಲಿದೆ.
ವಡಗೇರಾ ವರದಿ: ಕೃಷ್ಣಾ ನದಿಗೆ ಹೊಂದಿಕೊಂಡಿರುವ ಶಿವಪುರ, ಅಗ್ನಿಹಾಳ, ಗೂಂಡ್ಲೂರ ಸೇರಿದಂತೆ ಹಲವಾರು ಗ್ರಾಮಗಳಿಗೆ ಪ್ರವಾಹದ ಬಿಸಿ ತಟ್ಟಿದೆ. ಅಲ್ಲದೆ ಗೂಗಲ್ ಬ್ರೀಜ್ ಕಂ ಬ್ಯಾರೇಜ್ ನ ಮೂಲಕ ನೀರು ನದಿಗೆ ಹರಿ ಬಿಡಲಾಗುತ್ತಿದೆ. ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ನದಿಯಲ್ಲಿ ಇಳಿಯಬಾರದು ಎಂದು ವಡಿಗೇರಾ ತಹಶೀಲ್ದಾರ ಶ್ರೀನಿವಾಸ ಚಾಪೇಲ್ ತಿಳಿಸಿದ್ದಾರೆ.
ಇನ್ನೊಂದಡೆ ಬರ: ಕೃಷ್ಣಾ ನದಿಗೆ ಹೊಂದಿಕೊಂಡಿರುವ ಹಲವಾರು ಗ್ರಾಮಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಆದರೆ, ಎರಡು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಿರೀಕ್ಷಿದಷ್ಟು ಮಳೆ ಬಾರದೇ ಬರದ ಛಾಯೆ ಆವರಿಸಿದೆ. ಒಂದೆಡೆ ಪ್ರವಾಹ ಉಂಟಾದರೆ ಇನ್ನೊಂದೆ ಬರ ಎದುರಿಸುವ ದುಸ್ಥಿತಿ ರೈತರು ಅನುಭವಿಸುವಂತೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.