ಕಕ್ಕೇರಾ: ಪಟ್ಟಣದ ಗುಗಲಗಟ್ಟಿ ಗ್ರಾಮದಲ್ಲಿ ಕೆಲವು ಜಮೀನಿಗೆ ನೀರು ತಲುಪುತ್ತದೆ. ಮುಂದಿನ ರೈತರಿಗೆ ನೀರು ತಲುಪುತ್ತಿಲ್ಲ. ಹಲವಾರು ವರ್ಷಗಳ ಈ ಸಮಸ್ಯೆಗೆ ಅಂತ್ಯ ಯಾವಾಗ?
ಪಟ್ಟಣದ ಸಮೀಪದ ಊರಿನ ಜಮೀನಿಗೆ ನೀರು ಇಲ್ಲವಾದರೆ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಯಾವಾಗ? ಎಂಬುವುದು ಭಾಗದ ರೈತರು, ರೈತ ಮುಖಂಡರ ಪ್ರಶ್ನೆ. ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
’ಕಾಲುವೆ ದುರಸ್ತಿ, ಜಂಗಲ್ ಕಟಿಂಗ್ ಮಾಡದ ಪ್ರಯುಕ್ತ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ, ಲಕ್ಷಾಂತರ ಹಣ ಬಂದರೂ ಯಾವ ಕೆಲಸಗಳು ಸಹ ಆಗುತ್ತಿಲ್ಲ’ ಎಂದು ರೈತ ಮುಖಂಡರಾದ ಮುದ್ದಣ್ಣ ಅಮ್ಮಾಪುರ, ಬುಚ್ಚಪ್ಪನಾಯಕ ಆಕ್ರೋಶ ವ್ಯಕ್ತಪಡಿಸಿದರು.
’ಮುಂಗಾರು ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಸಜ್ಜೆ, ಜೋಳ, ಮೆಣಸಿನಕಾಯಿ, ತೊಗರಿ, ಹತ್ತಿ, ಶೇಂಗಾ ಬಿತ್ತನೆಯಲ್ಲಿ ತೊಡಗಿದ್ದಾರೆ. ತೊಗರಿ, ಹತ್ತಿ ಬೀಜಗಳು ಹೆಚ್ಚು ಮಾರಾಟವಾಗಿದ್ದು, ಉತ್ತಮ ಫಸಲು ನೀರಿಕ್ಷೆಯಲ್ಲಿದ್ದಾರೆ’ ಎಂದು ಬೀಜ, ರಸಗೊಬ್ಬರ ವ್ಯಾಪಾರಿ ಸಂಗಮೇಶ ಕುಂಬಾರ ತಿಳಿಸಿದರು.
’ಪಟ್ಟಣದ ಕೃಷಿ ಕೇಂದ್ರದಲ್ಲಿ ತೊಗರಿ 15,280 ಕೆಜಿ, ಹೆಸರು 360 ಕೆಜಿ ಬಂದಿದ್ದು, ರೈತರಿಗೆ 11,690 ಕೆ.ಜಿ, ಹೆಸರು 55 ಕೆಜಿ ಬೀಜ ವಿತರಿಸಿದ್ದೇವೆ’ ಎಂದು ಕೃಷಿ ಅಧಿಕಾರಿ ಚನ್ನಪ್ಪಗೌಡ ಪ್ರತಿಕೆಗೆ ತಿಳಿಸಿದರು.
ಕಳೆದರೆಡು ವರ್ಷಗಳಿಂದ ಬರಗಾಲಕ್ಕೆ ತತ್ತರಿಸಿದ್ದು, ಈ ಸಲ ಮುಂಗಾರುಮಳೆ ಚೆನ್ನಾಗಿ ಸುರಿಯುತ್ತಿದೆ. ಚೆನ್ನಾಗಿ ಮಳೆಯಾದರೆ ಉತ್ತಮ ಫಸಲು ಬರಲಿದೆ ಎಂದು ರೈತ ಶಿವರಾಜ ಜಂಪಾ ತಿಳಿಸಿದರು.
ಕಕ್ಕೇರಾದಲ್ಲಿ 19,133 ಎಕರೆ ಜಮೀನು ಇದ್ದು, ಇದರಲ್ಲಿ 15,909 ಎಕರೆಯಲ್ಲಿ ಸಾಗುವಳಿ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಸಿಬ್ಬಂದಿ ತಿಳಿಸಿದರು.
5 10 ಎಕರೆಯಿದ್ದ ರೈತರು ದೂರದ ನಗರಗಳಿಗೆ ಕೂಲಿಗಾಗಿ ಗುಳೆ ಹೋಗುವುದನ್ನು ತಡೆಗಟ್ಟಬೇಕು. ಸರ್ಕಾರದ ಯೋಜನೆಗಳು ರೈತರಿಗೆ ತಲುಪುವಂತಾಗಬೇಕು. ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಬೇಕು–ಮುದ್ದಣ್ಣ ಅಮ್ಮಾಪುರ, ಜಿಲ್ಲಾ ಕಾರ್ಯದರ್ಶಿ ರೈತ ಸಂಘ
ಮೊದಲು ಒಂದ್ಸಲ ಬಿತ್ತಿದ್ದೀವಿ ಮಳೆ ಬಂದು ಹೋಗಿದ್ದಕ್ಕೆ ಮರಳಿ ಹತ್ತಿ ಬೀಜ ತಂದು ಬಿತ್ತಿದ್ದೇವೆ ಒಳ್ಳೆ ರೇಟ ಇದ್ದು ಹೀಗಾಗಿ ನಮ್ಮಕಡೆ ನೀರು ತಲುಪುತ್ತಿಲ್ಲ–ಈರಪ್ಪ ಅಂಬಿಗೇರ, ಗುಗಲಗಟ್ಟಿ ರೈತ
ನಾರಾಯಣಪುರದಿಂದ ಮುಂದಿನ ವಾರದಲ್ಲಿ ಕಾಲುವೆ ದುರಸ್ತಿ ಜಂಗಲ ಕಟಿಂಗ್ ಟೆಂಡರ್ ಕರೆಯಲಾಗುವುದು ನಂತರ ದುರಸ್ತಿಗೊಳಿಸಲಾಗುವುದು–ಎಸ್.ಎ.ರಂಜಾನಿ, ವಿಭಾಗೀಯ ಅಧಿಕಾರಿ ಕಕ್ಕೇರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.