ADVERTISEMENT

ಯಾದಗಿರಿ | ಬಿಜೆಪಿಯಲ್ಲಿ ಚಟುವಟಿಕೆ ಚುರುಕು

ಲೋಕಸಭಾ ಚುನಾವಣೆಯ ಪ್ರಭಾರಿಗಳಾಗಿ ಜಿಲ್ಲೆಯ ಇಬ್ಬರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 6:40 IST
Last Updated 12 ಫೆಬ್ರುವರಿ 2024, 6:40 IST
ಅಮೀನರೆಡ್ಡಿ ಯಾಳಗಿ
ಅಮೀನರೆಡ್ಡಿ ಯಾಳಗಿ   

ಯಾದಗಿರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಎರಡ್ಮೂರು ತಿಂಗಳು ಬಾಕಿ ಇದ್ದು, ಜಿಲ್ಲಾ ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.

ಕಲಬುರಗಿ ಲೋಕಸಭಾ ಚುನಾವಣೆಯ ಪ್ರಭಾರಿಯಾಗಿ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ), ರಾಯಚೂರು ಲೋಕಸಭಾ ಚುನಾವಣೆಯ ಜಿಲ್ಲಾ ಸಂಚಾಲಕರಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಆಯ್ಕೆಯಾಗಿದ್ದಾರೆ. ಇದರಿಂದ ಚುನಾವಣೆಗೆ ಬಿಜೆಪಿಯಲ್ಲಿ ಸಿದ್ಧತೆಗಳು ನಡೆದಿವೆ.

ಇದೇ ವರ್ಷದ ಜನವರಿ ತಿಂಗಳಲ್ಲಿ ನೂತನ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಅಮೀನರೆಡ್ಡಿ ಯಾಳಗಿಯವರನ್ನು ನೇಮಕ ಮಾಡುವ ಮೂಲಕ ಬಿಜೆಪಿ ತನ್ನ ಚಟುವಟಿಕೆಯನ್ನು ಆರಂಭಿಸಿದೆ.

ADVERTISEMENT

ಇಬ್ಬರು ಸಂಸದರು:

ಜಿಲ್ಲೆಯೂ ರಾಯಚೂರು, ಕಲಬುರಗಿ ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಶಹಾಪುರ, ಸುರಪುರ, ಯಾದಗಿರಿ ಮತಕ್ಷೇತ್ರವೂ ರಾಯಚೂರು, ಗುರುಮಠಕಲ್‌ ಮತಕ್ಷೇತ್ರವೂ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಹೀಗಾಗಿ ಇಬ್ಬರು ಸಂಸದರನ್ನು ಹೊಂದಿರುವ ಜಿಲ್ಲೆಯಾಗಿದೆ. ಎರಡು ಕಡೆಯೂ ಬಿಜೆಪಿ ಸಂಸದರಾಗಿದ್ದಾರೆ.

ಯಾರಾಗಲಿದ್ದಾರೆ ಬಿಜೆಪಿ ಅಭ್ಯರ್ಥಿ?:

ರಾಜಾ ಅಮರೇಶ್ವರ ನಾಯಕ ರಾಯಚೂರು ಸಂಸದ, ಡಾ.ಉಮೇಶ ಜಾಧವ ಕಲಬುರಗಿ ಸಂಸದರಾಗಿದ್ದು, ಈ ಬಾರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ.

ನಾಲ್ಕು ಕಡೆ ಶಾಸಕರಿಲ್ಲ:

ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ನಾಲ್ಕು ಮತಕ್ಷೇತ್ರಗಳಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕೂ ಮತಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಸುರಪುರ, ಯಾದಗಿರಿಯಲ್ಲಿ ಬಿಜೆಪಿ ಶಾಸಕರಿದ್ದರೂ ಸೋತಿರುವುದರಿಂದ ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಪದಾಧಿಕಾರಿಗಳು ಮತ್ತಷ್ಟು ಹೆಚ್ಚಿನ ಕೆಲಸ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಗ್ರಾಮ ಚಲೋ ಅಭಿಯಾನ:

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪದಾಧಿಕಾರಿಗಳು ಒಂದು ಗ್ರಾಮದಲ್ಲಿ 24 ಗಂಟೆ ಇದ್ದು, ಕೆಲಸ ನಿರ್ವಹಿಸುವ ಟಾಸ್ಕ್‌ ನೀಡಲಾಗಿದೆ.

ಬಿಜೆಪಿ ಪಕ್ಷ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ. ನಿರಂತರ ಚಟುವಟಿಕೆಗಳು ಇರುತ್ತವೆ. ಅದರಂತೆ ಈ ಬಾರಿಯೂ ಗ್ರಾಮ ಚಲೋ ಅಭಿಯಾನದ ಮೂಲಕ ಫಲಾನುಭವಿಗಳ ಮನೆಗೆ ತೆರಳಿ ಕೇಂದ್ರದ ಯೋಜನೆಗಳ ಬಗ್ಗೆ ತಿಳಿಸಲಿದ್ದೇವೆ - ಅಮೀನರೆಡ್ಡಿ ಯಾಳಗಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ

ಶೀಘ್ರದಲ್ಲೇ ಪದಾಧಿಕಾರಿಗಳ ಆಯ್ಕೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಮೀನರೆಡ್ಡಿ ಯಾಳಗಿ ಆಯ್ಕೆಯಾಗದ ನಂತರ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಹೊಣೆ ಅಧ್ಯಕ್ಷರಿಗೆ ನೀಡಲಾಗಿದೆ. ಶೀಘ್ರದಲ್ಲೇ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುತ್ತಿದೆ. ನಂತರ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಿ ತಂಡ ರಚನೆ ಮಾಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ‘ಚಟುವಟಿಕೆ ಇಲ್ಲದ ತಾಲ್ಲೂಕು ಘಟಕದ ಅಧ್ಯಕ್ಷರನ್ನು ತೆಗೆದು ಹಾಕಿ ಹೊಸಬರನ್ನು ಆಯ್ಕೆ ಮಾಡಲಾಗುವುದು. ಕಡಿಮೆ ಅವಧಿಯಲ್ಲಿ ಪಕ್ಷಕ್ಕೆ ಬಂದರೂ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ಈಗ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಉತ್ಸಾಹದಿಂದ ಕೆಲಸ ಮಾಡಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.