ಯಾದಗಿರಿ: ಪರಿಸರದ ಕಾಳಜಿ, ಪರಿಸರದ ಸಂರಕ್ಷಣೆ ಅದರ ಉಪಯೋಗಗಳ ಬಗ್ಗೆ ಮಕ್ಕಳಿಗೆ ಸೂಕ್ತವಾದ ಮಾಹಿತಿ ತಿಳಿಸುವ ಮೂಲಕ ಅದನ್ನು ಪೋಷಕರಿಗೂ ತಿಳಿಸಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸಬೇಕು ಎಂದು ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ರಾಠೋಡ್ ಅಭಿಪ್ರಾಯಪಟ್ಟರು.
ವಡಗೇರಾ ತಾಲ್ಲೂಕಿನ ಹಾಲಗೇರಾ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಫಿರಮಲ್ ಫೌಂಡೇಶನ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪರಿಸರದ ಕುರಿತು ಪ್ರಬಂಧ ಮತ್ತು ಚಿತ್ರಕಲಾ ಮತ್ತು ಚರ್ಚಾ ಸ್ಪರ್ಧೆ ಏರ್ಪಡಿಸಿ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಬಹುಮಾನಗಳನ್ನು ನೀಡಿ, ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಫಿರಾಮಲ್ ಫೌಂಡೇಶನ್ ಪ್ರೋಗ್ರಾಮ್ ಲೀಡ್ ಸಂಚಾಲಕ ಅನಿಲ್ ಕುಮಾರ್ ರೆಡ್ಡಿ ಮಾತನಾಡಿ, ಪರಿಸರದ ಕಾಳಜಿ ಬಗ್ಗೆ ತಿಳಿಸುವುದರ ಜೊತೆಗೆ ಗ್ರಾಮೀಣ ಭಾಗದ ಮಕ್ಕಳು ಆದಷ್ಟು ಗೈರಾಗದಂತೆ ಶಾಲೆಗೆ ಆಗಮಿಸಿ ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ನಾಗರಿಕರಾಗಬೇಕು ಎಂದರು.
ಫಿರಾಮಲ್ ಫೌಂಡೇಶನ್ ಮನೋಜ್, ಶಾಹಿದ್, ರಾಹುಲ್, ಸತ್ಯನಾರಾಯಣ ಅವರು ಮಕ್ಕಳಿಗೆ ಪ್ರಬಂಧ, ಚಿತ್ರಕಲಾ ಮತ್ತು ಚರ್ಚಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹಾಲಗೇರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ್, ಯಾದಗಿರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಬಿ.ಬಂಡಿ, ಶಾಲೆಯ ಸಹ ಶಿಕ್ಷಕ ಸುಮಾ ಕಂಬಾರ, ಮಡಿವಾಳಪ್ಪ ಗುಡ್ಲರ, ವಿಶ್ವನಾಥ, ಚಂದ್ರಾಯಗೌಡ, ಪ್ರೇಮಾ ಹಾಗೂ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.