ಕಕ್ಕೇರಾ: ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮ ಸುಕ್ಷೇತ್ರ ತಿಂಥಣಿಯ ಮೌನೇಶ್ವರ ಜಾತ್ರಾ ಅಂಗವಾಗಿ ಮಂಗಳವಾರ ಸುರಪುರದ ಕಾಳಿಕಾದೇವಿ ದೇವಸ್ಥಾನದಿಂದ ಬಂದ ಕಾಳಿಕಾದೇವಿ ಹಾಗೂ ಸೂಗುರೇಶ್ವರ ಮೂರ್ತಿ ಹೊತ್ತ ಪಲ್ಲಕ್ಕಿಯನ್ನು ತಿಂಥಣಿ ಗ್ರಾಮಸ್ಥರು ಸಂಭ್ರಮ ಸಡಗರಿಂದ ಬರಮಾಡಿಕೊಂಡರು.
ನಂತರ ಮೆರವಣಿಗೆಯು ಪುರವಂತರ ಹಾಗೂ ವಿವಿಧ ವಾದ್ಯಗಳೊಂದಿಗೆ ಗಂಗಸ್ಥಳಕ್ಕೆ ತೆರಳಿದ ಪಲ್ಲಕ್ಕಿ ಉತ್ಸವವು ನಂತರ ದೇವಸ್ಥಾನ ಪ್ರವೇಶಗೊಂಡಿತು. ಸುರಪುರದಿಂದ ತಿಂಥಣಿಗೆ ಹೊರಟ ಪಲ್ಲಕ್ಕಿಯನ್ನು ಮಾರ್ಗಮಧ್ಯದ ಗ್ರಾಮಗಳ ಜನರು ಪೂಜೆ ಸಲ್ಲಿಸಿದರು. ಪಲ್ಲಕ್ಕಿ ಮೆರವಣಿಗೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಮಾದ್ಲಿ ಪ್ರಸಾದ ಸವಿದ ಭಕ್ತರು:
ಸುರಪುರದಿಂದ ಪಲ್ಲಕ್ಕಿ ಜತೆ ಬಂದ ನೂರಾರು ಜನರು ಮೌನೇಶ್ವರ ಕಟ್ಟೆ ಬಳಿ ಮಾದಲಿ (ಗೋಧಿಯಿಂದ ಮಾಡಿದ ಸಿಹಿ) ವಿಶೇಷ ತಿನಿಸಿನೊಂದಿಗೆ ಅನ್ನ-ಸಾರು ಸವಿದು ಸಂತೃಪ್ತರಾದರು.
ಮೌನೇಶ್ವರ ಜಾತ್ರೆಗೆ ಬಂದ ಭಕ್ತರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಮಾದಲಿ ಜತೆಗೆ ಜೋಳದ ಬಾನ ವಿತರಿಸಲಾಯಿತು. ವಿವಿಧ ಜಿಲ್ಲೆ ಹಾಗೂ ದೂರದ ಗ್ರಾಮಗಳಿಂದ ಬಂದ ಭಕ್ತರು, ವಿಶ್ವಕರ್ಮ ಸಮಾಜದ ಜನರು ದೇವಸ್ಥಾನದ ಆವರಣದಲ್ಲಿ ಪ್ರಸಾದ ಸೇವಿಸಿದರು.
ಪಲ್ಲಕ್ಕಿ ಮೆರವಣಿಗೆಯಲ್ಲಿ ಮೌನೇಶ್ವರ ಸ್ವಾಮೀಜಿ, ಮುಖಂಡರಾದ ತಿಪ್ಪಣ್ಣ ಕುರ್ಲಿ, ಚಿನ್ನಪ್ಪ ಗುಡಗುಂಟಿ, ಸಂಜೀವನಾಯಕ, ದೇವಿಂದ್ರಪ್ಪ, ಗಂಗಾಧರನಾಯಕ, ಭೀಮಣ್ಣ ಕವಲ್ದಾರ, ಫಕ್ರುದ್ದೀನ್ ಹವಾಲ್ದಾರ್, ಹಣಮಂತ್ರಾಯ, ಬಸವರಾಜ ಕವಲ್ದಾರ, ಭೈರಣ್ಣ ಅಂಬಿಗರ, ಗಂಗು ಬಡಿಗೇರ ಸೇರಿ ದೇವಸ್ಥಾನ ಸಮಿತಿ ಸದಸ್ಯರು, ನೂರಾರು ಪುರವಂತರು, ಭಕ್ತರು ಪಾಲ್ಗೊಂಡಿದ್ದರು.
ಸುರಪುರದ ಪಲ್ಲಕ್ಕಿ ಬರಮಾಡಿಕೊಂಡ ಗ್ರಾಮಸ್ಥರು ತಿಂಥಣಿ ಗ್ರಾಮಸ್ಥರಿಂದ ಪಲ್ಲಕ್ಕಿಗೆ ಭವ್ಯಸ್ವಾಗತ ಭಕ್ತರಿಂದ ಮಹಾಪ್ರಸಾದ ಸ್ವೀಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.