ADVERTISEMENT

ಶಹಾಪುರ | ‘ಸಂಕ್ರಾಂತಿ ಜೋಡುಪಲ್ಲಕ್ಕಿ ಉತ್ಸವಕ್ಕೆ ವ್ಯವಸ್ಥೆ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 15:55 IST
Last Updated 20 ಡಿಸೆಂಬರ್ 2023, 15:55 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ   

ಶಹಾಪುರ: ಸಂಕ್ರಾಂತಿ ಹಬ್ಬದಂದು ನಗರದಲ್ಲಿ ನಡೆಯುವ ದಿಗ್ಗಿ ಸಂಗಮೇಶ್ವರ ಮತ್ತು ಭೀಮರಾಯನಗುಡಿ ಬಲಭೀಮೇಶ್ವರ ಜೋಡು ಪಲ್ಲಕ್ಕಿ ಉತ್ಸವಗಳು ಪ್ರತಿ ವರ್ಷದಂತೆ ಈ ಬಾರಿಯೂ ದಿಗ್ಗಿ ಅಗಸಿಯಿಂದಲೇ (ಕೋಟೆ) ಜರುಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಗರದ ದಿಗ್ಗಿ ಅಗಸಿ ಶಿಥಿಲಗೊಂಡು ಅಗಸಿಯ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಆದರೆ ದಿಗ್ಗಿ ಅಗಸಿ ದುರಸ್ತಿ ಕಾರ್ಯದ ಕುರಿತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹಾಗೂ ಪುರಾತತ್ವ ಇಲಾಖೆಯೊಂದಿಗೆ ಮಾತನಾಡಿ ದುರಸ್ತಿ ಕಾಮಗಾರಿಗಾಗಿ ₹ 90 ಲಕ್ಷ ಅನುದಾನ ಕಲ್ಪಿಸುವಂತೆ ಪತ್ರ ಬರೆಯಲಾಗಿದೆ. ಒಂದು ವೇಳೆ ಹಣಕಾಸಿನ ಅನುದಾನ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ಆದರೆ ಸದ್ಯಕ್ಕೆ ಸಂಕ್ರಾಂತಿ ಹಬ್ಬದವರೆಗೂ ಕಾಮಗಾರಿ ನಡೆಯದ ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಜೋಡು ಪಲ್ಲಕ್ಕಿ ಉತ್ಸವ ಇದೇ ಮಾರ್ಗವಾಗಿ ತೆರಳಲು ಅನುಮತಿ ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವ ದರ್ಶನಾಪುರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.