ಗುರುಮಠಕಲ್: ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲು ಶೀಘ್ರ ಕ್ರಮ ವಹಿಸುವಂತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ 'ತೆಲಂಗಾಣ, ಆಂಧ್ರ ಪ್ರದೇಶದ ಗಡಿ ಹಂಚಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ತೆಲುಗು ಪ್ರಭಾವ ದಟ್ಟವಾಗಿದೆ. ಇಲ್ಲಿ ಕನ್ನಡದ ವಾತಾವರಣ ಸೃಷ್ಟಿಗೆ ಶೈಕ್ಷಣಿಕ ಪ್ರಗತಿ ಅವಶ್ಯ. ಜತೆಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಇರಬೇಕೆಂದು ಸರ್ಕಾರದ ಆದೇಶವಿದೆ. ನಮ್ಮದು ಜಿಲ್ಲೆಯಾಗಿ ದಶಕ ಕಾಲ ಕಳೆದರೂ ಇನ್ನೂ ವಿಶ್ವವಿದ್ಯಾಲಯ ಸ್ಥಾಪನೆಯಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಮ್ಮ ಭಾಗದ ಯುವಕರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಲಬುರಗಿ, ರಾಯಚೂರು, ಧಾರವಾಡ ವಿಶ್ವವಿದ್ಯಾಲಯಗಳಿಗೆ ತೆರಳುತ್ತಿದ್ದಾರೆ. ಜತೆಗೆ ರಾಯಚೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ನಮ್ಮ ಜಿಲ್ಲೆಯ ಶೇ 60ರಷ್ಟು ಕಾಲೇಜುಗಳಿವೆ. ಪ್ರತಿ ನೂರು ಕಾಲೇಜುಗಳಿಗೆ ಒಂದು ವಿ.ವಿ. ಸ್ಥಾಪನೆಯಾಗಬೇಕೆಂದು ಸಂಸ್ಥೆಯೊಂದು ಹೇಳಿದೆ. ಈ ಹಿಂದೆ ನೀವು ವಸತಿ ಸಹಿತಿ ಕಾಲೇಜುಗಳನ್ನು ಆರಂಭಿಸಿದಾಗ ನಮ್ಮ ಜಿಲ್ಲೆಯೂ ಫಲಾನುಭವಿಯಾಗಿದ್ದು ಜನ ಸ್ಮರಿಸುತ್ತಿದ್ದಾರೆ. ಶಿಕ್ಷಣ ಪ್ರೇಮಿಗಳಾದ ತಾವು ಜನರ ಬೇಡಿಕೆಯಂತೆ, ಜಿಲ್ಲಾ ಕೇಂದ್ರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮವಹಿಸಿ' ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.