ಸೈದಾಪುರ: ಅಂಗವಿಕಲ ಮಕ್ಕಳ ಬಗ್ಗೆ ಪಾಲಕರು ವಿಶೇಷ ಕಾಳಜಿ ಮತ್ತು ಜಾಗೃತ ವಹಿಸಬೇಕು ಎಂದು ವಿಕಲಚೇತನ ಮಕ್ಕಳ ಪುನಶ್ಚೇತನ ಕಾರ್ಯಕ್ರಮದ ತರಬೇತಿದಾರ ರಮೇಶ ಮಾನೆ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿ ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ಅಂಗವಿಕಲರ ಜೀವನ ಚಕ್ರ ವಿಧಾನ ಯೋಜನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಗವಿಕಲ ಮಕ್ಕಳ ಪಾಲಕರಿಗೆ ಹಮ್ಮಿಕೊಂಡಿದ್ದ ಪುನಃಶ್ಚೇತನ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಟ್ಟಿನಿಂದ 8 ವರ್ಷದೊಳಗಿನ ಮಕ್ಕಳ ಪಾಲಕರ ಕರ್ತವ್ಯ ಮತ್ತು ಜವಾಬ್ದಾರಿಗಳು, ಲಾಲನೆ-ಪಾಲನೆ, ಪುನಃಶ್ಚೇತನ ಶಿಕ್ಷಣ, ದೈನಂದಿನ ಚಟುವಟಿಕೆ ಕೌಶಲ, ಸಾಧನ-ಸಲಕರಣೆಗಳ ಉಪಯೋಗ ಮತ್ತು ಬಳಸುವ ವಿಧಾನದ ಬಗ್ಗೆ ಪಾಲಕರು ಸರಿಯಾದ ಕ್ರಮ ಅನುಸರಿಸಬೇಕು. ಅಂಗವಿಕಲ ಮಕ್ಕಳಿಗೆ ನಿತ್ಯ ದೈಹಿಕ ವ್ಯಾಯಮ, ಪೌಷ್ಟಿಕ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ದೈಹಿಕ ಬೆಳವಣಿಗೆಗೆ ಸಂಬಂಧ ತೂಕ, ಎತ್ತರದ ಬಗ್ಗೆ ಪಾಲಕರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಎಪಿಡಿ ಸಂಸ್ಥೆಯ ಹಿರಿಯ ಪಿಜಿಯೋಥೆರಪಿಸ್ಟ್ ಡಾ.ಮಾರ್ಟಿನ್, ಪುನಃಶ್ಚೇತನ ಕಾರ್ಯಕ್ರಮದ ಕಾರ್ಯಕರ್ತ ರಮೇಶ.ಸಿ, ಸಹಾಯಕ ಮಲ್ಲಯ್ಯ ಸೇರಿ ಪಾಲಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.