ಶಹಾಪುರ: ‘ಉತ್ತಮ ಪರಿಸರದಿಂದ ನಾವು ಮಳೆ ಹಾಗೂ ಶುದ್ಧ ಗಾಳಿ ಪಡೆಯುತ್ತವೆ. ಸಸಿಯನ್ನು ನೆಟ್ಟರೆ ಸಾಲದು, ಅದನ್ನು ಪೋಷಣೆ ಮಾಡುವುದು ಅಗತ್ಯವಾಗಿದೆ. ಪರಿಸರ ಮತ್ತು ಕೃಷಿಯ ನಡುವೆ ಕರಳುಬಳ್ಳಿಯ ಸಂಬಂಧವಿದೆ’ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಸಿದ್ದರಾಮ ಟಿ.ಪಿ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಸರದ ಜಾಗೃತಿ ಮತ್ತು ಅರಿವು ಮೂಡಿಸಬೇಕು. ಸಾರ್ವಜನಿಕ ಕಚೇರಿಗಳಲ್ಲಿಯೂ ಸಾಕಷ್ಟು ಜಾಗವಿರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಂಡು ಸಸಿ ನೆಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವರ್ಗವು ತಮ್ಮ ಜಮೀನುಗಳ ಬದುವಿನಲ್ಲಿ ಸಸಿಯನ್ನು ಹಾಕಬೇಕು. ಅನವಶ್ಯಕವಾಗಿ ರಸ್ತೆ ಬದಿಯ ಗಿಡವನ್ನು ಕಡಿದು ಹಾಕಬಾರದು. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಿವುದು ಅತ್ಯಂತ ವಿನಾಶಕಾರಿಯಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಉಪವಲಯ ಅರಣ್ಯಾಧಿಕಾರಿ ಕಾಶಪ್ಪ ಮಾತನಾಡಿ, ‘19,810 ಸಸಿಗಳು ನಮ್ಮ ಬಳಿ ಇವೆ. ಅರಳಿ, ಬೇವು, ಹೊಂಗೆ, ಹಿಪ್ಪೆ ನೆರಳೆ ಸಸಿಗಳು ಇವೆ. ಪ್ರಸಕ್ತ ಬಾರಿ ತಾಲ್ಲೂಕಿನ ವಿಭೂತಿಹಳ್ಳಿಯಿಂದ ರಸ್ತಾಪುರ ಕಮಾನ, ಶಿರವಾಳ, ಅಣಬಿ, ಮಡ್ನಾಳದಿಂದ ಶಿರವಾಳ ಹೀಗೆ ರಸ್ತೆ ಬದಿ ಎಂಟು ಕಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಕಾಲಕ್ಕೆ ಮಳೆಯಾಗಿದೆ. ಸಸಿ ನೆಡುವ ಕಾರ್ಯ ಸಾಗಿದೆ. ಸಾರ್ವಜನಿಕರು ಸಹ ನೆಟ್ಟ ಸಸಿಗಳ ಬಗ್ಗೆ ಕಾಳಜಿ ವಹಿಸಿ ಪರಿಸರ ಬೆಳೆಸಲು ಸಹಕರಿಸಬೇಕು’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶೋಭಾ, ಬಸವರಾಜ, ಶಿರಸ್ತೆದಾರ ಪ್ರಕಾಶ ಪಾಟೀಲ, ಅನಿಲ ಕುಮಾರ, ಸಯ್ಯದ ರಿಜ್ವಾನ ಅರಿಕೇರಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.