ADVERTISEMENT

ಶಹಾಪುರ: ಸರ್ಕಾರಿ ನೌಕರರ ರಕ್ಷಣೆಗೆ ಪೊಲೀಸರ ಕೈ ಚಳಕ!

ಟಿ.ನಾಗೇಂದ್ರ
Published 9 ಸೆಪ್ಟೆಂಬರ್ 2024, 4:58 IST
Last Updated 9 ಸೆಪ್ಟೆಂಬರ್ 2024, 4:58 IST

ಶಹಾಪುರ: ನಗರದ ಮನೆಯೊಂದರಲ್ಲಿ  ಅಂದರ್‌–  ಬಾಹರ್‌ ಜೂಜಾಟ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿ 14 ಜನರಿಂದ ₹1.72 ಲಕ್ಷ ವಶಪಡಿಸಿಕೊಂಡು ನ್ಯಾಯಾಲಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆದರೆ ಜೂಜಾಟದಲ್ಲಿ ಸಿಕ್ಕಿ ಬಿದ್ದ 14 ಜನರ ರಕ್ಷಣೆಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್‌ಶೀಟ್‌ನಲ್ಲಿ ತಮ್ಮ ಕೈ ಚಳಕ ಪ್ರದರ್ಶಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಏನಿದು ಪ್ರಕರಣ: 2023 ಅಕ್ಟೋಬರ್ 23ರಂದು ಶಹಾಪುರ ಠಾಣೆಯ ಪೊಲೀಸರು ನಗರದ ಮನೆ ಒಂದರಲ್ಲಿ ಇಸ್ಪೀಟ್ ಆಟ ಆಡುತ್ತಿದ್ದಾಗ ದಾಳಿ ಮಾಡಿ 14 ಜನರಿಂದ ₹1.72 ಲಕ್ಷ ವಶಪಡಿಸಿಕೊಂಡಿದ್ದರು. ಜೂಜಾಟದಲ್ಲಿ ಭಾಗಿಯಾಗಿದ್ದರು ಎನ್ನಲಾದ ಜನರಲ್ಲಿ ಶಹಾಪುರ ಡಿಪೋದಲ್ಲಿ ಮೂವರು ಚಾಲಕ ಕಂ ನಿರ್ವಾಹಕ, ಒಬ್ಬರು ಸಹಾಯಕ ಸಂಚಾರಿ ಅಧೀಕ್ಷಕ, ಮೂವರು ಕಂಟ್ರೋಲರ್, ಹಾಗೂ ಎಸ್.ಡಿ.ಸಿ ಸೇರಿದಂತೆ ವಿವಿಧ ಹುದ್ದೆಯಲ್ಲಿ 13 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶಹಾಪುರ ರಸ್ತೆ ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಆದರೆ ತನಿಖಾಧಿಕಾರಿಯು ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್‌ ಸಲ್ಲಿಸುವಾಗ ಜೂಜಾಟದಲ್ಲಿ ಸಿಕ್ಕಿ ಬಿದ್ದಿರುವ ವ್ಯಕ್ತಿಗಳ 14 ಜನರ ಭಾವಚಿತ್ರವನ್ನು ಅಂಟಿಸಿದ್ದಾರೆ. ಆದರೆ ವ್ಯಕ್ತಿಯ ಉದ್ಯೋಗ ನಮೂದಿಸುವಾಗ ಕೇವಲ ನೌಕರ ಎಂದು ನಮೂದಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ತನಿಖೆಯ ನೆಪದಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಜೂಜಾಟದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ‘ಸಮಗ್ರ ತನಿಖೆ ನಡೆಸಬೇಕು’ ಎಂದು ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ADVERTISEMENT

‘ಜೂಜಾಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 14 ಜನರ ಪೈಕಿ 13 ಜನರ ಅಂದು ಕರ್ತವ್ಯ ನಿರ್ವಹಿಸುತ್ತಿರುವ ಹಾಜರಾತಿ ಪುಸ್ತಕ ಹಾಗೂ ಪೊಲೀಸರು ದಾಳಿ ಮಾಡಿದ ವಿವರದ ಪ್ರತಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ನೌಕರರ ವಿರುದ್ಧ ರಸ್ತೆ ಸಾರಿಗೆ ಇಲಾಖೆಯು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.