ADVERTISEMENT

ಅಧ್ಯಾತ್ಮದಿಂದ ಮನಸ್ಸಿನ ಶುದ್ಧೀಕರಣ

ದೇವಪುರ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 15:42 IST
Last Updated 10 ಮಾರ್ಚ್ 2024, 15:42 IST
ಸುರಪುರ ಸಮೀಪದ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಾಧಕರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು 
ಸುರಪುರ ಸಮೀಪದ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಾಧಕರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು    

ಸುರಪುರ: ‘ಆಧ್ಯಾತ್ಮಿಕ ಚಿಂತನೆಗಳಿಂದ ನೆಮ್ಮದಿಯ ಜೀವನ ಸಾಧ್ಯ. ಮನಸ್ಸಿನ ಶುದ್ಧೀಕರಣಕ್ಕೆ ಅಧ್ಯಾತ್ಮದ ಅಗತ್ಯವಿದೆ’ ಎಂದು ದೇವಪುರ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.

ಇಲ್ಲಿಗೆ ಸಮೀಪದ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ 19ನೇ ವರ್ಷದ ಶರಣಬಸವೇಶ್ವರ ಪುರಾಣ ಪ್ರವಚನ ಮತ್ತು ಶರಣ ಸಂತರ ಸದ್ಭಾವ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಧ್ಯಾತ್ಮ ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. ಅದು ಅಪಾರ ಶಕ್ತಿ ಹೊಂದಿದೆ. ಪ್ರತಿಯೊಬ್ಬ ಮನುಷ್ಯ ಮೋಕ್ಷದ ಬಾಗಿಲಿಗೆ ಮುಟ್ಟಲು ಅಧ್ಯಾತ್ಮದ ಸ್ಪರ್ಶ ಬೇಕು. ಅಧ್ಯಾತ್ಮ ಚಿಂತನೆ, ದೇವರ ಆರಾಧನೆಯಿಂದ ಮನುಷ್ಯ ಸನ್ಮಾರ್ಗದಲ್ಲಿ ನಡೆಯಬಹುದು’ ಎಂದರು.

ADVERTISEMENT

ಹೆಡಗಿಮುದ್ರೆಯ ಶಾಂತ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ‘ಇಂದು ಮನುಷ್ಯನಿಗೆ ಶಾಂತಿ, ನೆಮ್ಮದಿ ಇಲ್ಲವಾಗಿದೆ. ದೇವರು ಮತ್ತು ಅಧ್ಯಾತ್ಮವನ್ನು ಮರೆತಿರುವುದೇ ಇದಕ್ಕೆ ಮುಖ್ಯ ಕಾರಣ. ಭಗವಂತನ ಮೇಲೆ ನಂಬಿಕೆಯಿರಿಸಿದರೆ ಎಂಥ ಕಷ್ಟದಿಂದಲೂ ಕೂಡ ಆತ ಪಾರು ಮಾಡುತ್ತಾನೆ’ ಎಂದು ಹೇಳಿದರು.

ಶಿವಶರಣಪ್ಪ ಗುಮ್ಮಾ ಮಾತನಾಡಿದರು.

ಪ್ರವಚನಕಾರ ನಾಗಲಿಂಗಯ್ಯ ಶಾಸ್ತ್ರಿ ಸ್ಥಾವರಮಠ ಪುರಾಣ ಮಂಗಲ ಗೊಳಿಸಿದರು. ಬಳಿಕ 208 ಮಹಿಳೆಯರಿಗೆ ಉಡಿ ತುಂಬಲಾಯಿತು. ಭಕ್ತಾದಿಗಳಿಗೆ ಅನ್ನದಾಸೋಹ ಜರುಗಿತು. 11 ದಿನಗಳವರೆಗೆ ಜರುಗಿದ ಪ್ರವಚನದಲ್ಲಿ ಬಾಬುರಾವ್ ಹೂಗಾರ, ಶಿವಾನಂದ ಮಡಿವಾಳ ತಬಲಾ ಹಾಗೂ ಸಂಗೀತ ಸಾಥ್ ನೀಡಿದರು. ಅಮರೇಶ ಗೋಗಿ ನಿರೂಪಿಸಿದರು. ರಾಜೇಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.