ಸೈದಾಪುರ: ಸಮೀಪದ ಬಳಿಚಕ್ರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಹೇಶಮ್ಮ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಯಾದಗಿರಿ ಜಿಲ್ಲೆಗೆ ತೃತೀಯ ಸ್ಥಾನ (ಶೇ 96.67) ಪಡೆದಿದ್ದಾರೆ.
ಮಹೇಶಮ್ಮ ಅವರ ತಂದೆ ಸಿದ್ದಪ್ಪ ತೀರಿಕೊಂಡಿದ್ದಾರೆ. ತಾಯಿ ಮರೆಮ್ಮ ಬೇರೆಯವರ ಜಮೀನಿನಲ್ಲಿ ದಿನಗೂಲಿ ಮಾಡಿ ಕುಟುಂಬ ನಿರ್ವಹಿಸುವುದಲ್ಲದೆ ಮೂರು ಜನ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಗಳಲ್ಲೇ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದ ಮಹೇಶಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಶೇ 97.76 ಅಂಕ ಪಡೆದಿದ್ದರು. ಪಿಯು ಕಲ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಇತಿಹಾಸದಲ್ಲಿ 100, ಅರ್ಥಶಾಸ್ತ್ರ 96, ರಾಜ್ಯಶಾಸ್ತ್ರ 98, ಕನ್ನಡ 98, ಇಂಗ್ಲಿಷ್ 88, ಸಮಾಜಶಾಸ್ತ್ರ 100 ಅಂಕಗಳನ್ನು ಪಡೆದಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಸಾಂಸ್ಕೃತಿಕ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಕಲಾಲ್ ಅವರು ಮಹೇಶಮ್ಮ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭಹಾರೈಸಿದರು.
ಶಿಕ್ಷಣಕ್ಕೆ ಬಡತನ ಅಡ್ಡಿಯಾಗುವುದಿಲ್ಲ. ನಾನು ಮುಂದೆ ಉನ್ನತ ಸರ್ಕಾರಿ ಅಧಿಕಾರಿ ಆಗಿ ನನ್ನ ತಂದೆ–ತಾಯಿ ಅನುಭವಿಸಿದ ಕಷ್ಟವನ್ನು ನಿವಾರಿಸುತ್ತೇನೆ. ನನ್ನ ತಂದೆಯ ಕನಸು ನನಸು ಮಾಡುತ್ತೇನೆಮಹೇಶಮ್ಮ, ಕಲಾ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ
ನನ್ನ ಕಷ್ಟವನ್ನು ಮಕ್ಕಳು ನಿವಾರಿಸುವ ಭರವಸೆ ಇದೆ. ಎಲ್ಲಿಯವರೆಗೆ ಓದುತ್ತಾರೋ ಅಲ್ಲಿವರೆಗೆ ಶ್ರಮಪಡುತ್ತೇನೆ. ಯಾರಾದರು ನಮಗೆ ಸಹಾಯ ಮಾಡಿದರೆ ಅನುಕೂಲವಾಗುತ್ತದೆಮರೆಮ್ಮ ಸಿದ್ದಪ್ಪ ಬಳಿಚಕ್ರ ಮಹೇಶಮ್ಮಳ ತಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.