ಶಹಾಪುರ: ಪ್ರಸಕ್ತ ವರ್ಷ ಮುಂಗಾರು ಉತ್ತಮ ಭರವಸೆ ಹಾಗೂ ನಿರೀಕ್ಷೆ ಹೊತ್ತು ಬಂದಿತ್ತು. ಮೇ ತಿಂಗಳಲ್ಲಿ ಹದಭರಿತ ಮಳೆಯಾಗಿತ್ತು. ಆದರೆ ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಮಳೆ ಕೊರತೆಯಿಂದ ರೈತರು ಆತಂಕಗೊಂಡಿದ್ದಾರೆ.
ತಾಲ್ಲೂಕಿನಲ್ಲಿ ಜೂ.29ರಿಂದ ಜು.5ರವರೆಗೆ ಸಾಮಾನ್ಯವಾಗಿ 24.8 ಮಿ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಕೇವಲ 14.9 ಮಳೆಯಾಗಿದ್ದು ಶೇ 40ರಷ್ಟು ಕೊರತೆ ಮಳೆ ಅನುಭವಿಸುವಂತೆ ಆಗಿದೆ. ಆದರೆ ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಶೇ 2ರಷ್ಟು ಮಳೆ ಕೊರತೆ ಆಗಿದೆ. ವಿಚಿತ್ರವೆಂದರೆ ವಡಗೇರಾ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ 80 ಮಿ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ 112 ಮಿ.ಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೊಳ ತಿಳಿಸಿದರು.
‘ನೆರೆಹೊರೆ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಆದರೆ ನಮ್ಮ ತಾಲ್ಲೂಕಿನಲ್ಲಿ ಆಗಿಲ್ಲ. ಸುರುಪುರ ತಾಲ್ಲೂಕಿನಲ್ಲಿ ಈಗಾಗಲೇ ಒಂದು ತಿಂಗಳ ಬೆಳೆ ಇವೆ. ರೈತರು ರಸಗೊಬ್ಬರ, ರಂಟೆ ಹೊಡೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ನಾವು ಇನ್ನೂ ನೆಲಕ್ಕೆ ಬೀಜ ಹಾಕಿಲ್ಲ’ ಎನ್ನುತ್ತಾರೆ ಹತ್ತಿಗುಡೂರ ಗ್ರಾಮದ ರೈತ ಮಲ್ಲಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.