ಪ್ರಜಾವಾಣಿ ವಾರ್ತೆ ಕೆಂಭಾವಿ: ದೇಶದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ತತ್ವ ಸಿದ್ಧಾಂತಗಳ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದ ಶ್ರೀ ಆದಿ ಶಂಕರಾಚಾರ್ಯರು ಈ ದೇಶ ಕಂಡ ಮಹಾನ ಸನ್ಯಾಸಿ ಎಂದು ಸಂಸ್ಕøತ ಪಂಡಿತ ಶ್ರೀಪಾದ ಭಟ್ಟ ಜೋಷಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವಿಪ್ರ ಬಳಗದ ವತಿಯಿಂದ ನಡೆದ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಹಿಂದೂ ಧರ್ಮ ದೇಶದ ಒಂದು ಬೃಹತ್ ವೃಕ್ಷ ಇಂಥಾ ವೃಕ್ಷದ ಬೇರುಗಳೆ ನಮ್ಮ ದೇಶದ ಇಂಥಾ ಮಹಾನ ಅವತಾರ ಪುರುಷರು ಎಂದು ಬಣ್ಣಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಪೂಜಿಸುವವನೆ ನಿಜವಾದ ಸನ್ಯಾಸಿಯಾಗುತ್ತಾನೆ ಅಂಥಾ ಮಹಾನ್ ಕಾರ್ಯವನ್ನು ಶ್ರೀ ಶಂಕರರು ಮಾಡಿದರು. ನ್ಯಾಸತ್ರಯಗಳನ್ನು ತ್ಯಜಿಸಿದವನೆ ನಿಜವಾದ ಸನ್ಯಾಸಿಯಾಗಿದ್ದು ಅಂಥವರ ಸಾಲಿನಲ್ಲಿ ಇವರೊಬ್ಬರು ಎಂದ ಅವರು ತಮ್ಮ 12ನೇ ವಯಸ್ಸಿನಲ್ಲಿಯೆ ಎಲ್ಲ ಶಾಸ್ತ್ರಗಳನ್ನು ಓದಿ ಕಾಲ್ನಡಿಗೆಯಲ್ಲಿಯೆ ದೇಶ ಸಂಚಾರ ಮಾಡಿ ಸಮಗ್ರ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿದ ಕೀರ್ತಿ ಶ್ರೀ ಶಂಕರರಿಗೆ ಸಲ್ಲುತ್ತದೆ ಎಂದು ಹೇಳಿದರು.
ಶ್ರೀಪಾದ ಭಟ್ಟ ಜೋಷಿ ಶಂಕರರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ವೆಂಕಟೇಶ ನಾಡಿಗೇರ, ಶಾಮಸುಂದರ ನಾಡಿಗೇರ, ರೂಪಾ ಭಟ್ಟ, ಮಂಜುಳಾ ಭಟ್ಟ, ಶಾಂಭವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.