ಹುಣಸಗಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಡಿ.ವೈ.ಎಸ್.ಪಿ ಹನುಮಂತರಾಯ ಕೆ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಮುರಗುಂಡಿ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಶನಿವಾರ ಬೆಳಿಗ್ಗೆ ಆಗಮಿಸಿ ಎಕ್ಸ್ರೇ, ಪ್ರಯೋಗಾಲಯ, ಮೆಡಿಕಲ್ ಸ್ಟೋರ್ ಸೇರಿದಂತೆ ಇತರ ಸ್ಥಳಗಳಲ್ಲಿ ಭೇಟಿ ನೀಡಿ ಕಾಗದ ಪತ್ರಗಳ ಪರಿಶೀಲನೆ ನಡೆಸಿದರು. ಕೆಲ ಹಾಜರಾತಿ ಹಾಗೂ ದಾಖಲಾತಿಗಳು ಸರಿಯಾಗಿ ಇಟ್ಟಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ವೈದ್ಯರಾದ ಡಾ. ಎಸ್.ಬಿ.ಪಾಟೀಲ ಆಗಮಿಸಿ ಕರ್ತವ್ಯ ನಿರ್ವಹಣೆ ಹಾಗೂ ರೋಗಿಗಳ ಭೇಟಿ, ಚಿಕಿತ್ಸೆ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.
ತದನಂತರ ಲೋಕಾಯುಕ್ತ ಡಿ.ವೈ.ಎಸ್.ಪಿ ಅವರು ವಿವಿಧ ಕೋಣೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಸ್ವಚ್ಛತೆ, ಕುಡಿಯುವ ನೀರು ಹಾಗೂ ರೋಗಿಗಳ ಆರೋಗ್ಯ ವಿಚಾರಿಸಿದರು. ತುರ್ತು ಆರೋಗ್ಯ ಸೇವೆ, ಚಿಕಿತ್ಸೆ ಬಗ್ಗೆ ರೋಗಿಗಳನ್ನು ವಿಚಾರಿಸಿದಾಗ ‘ಸೂಕ್ತ ಸೇವೆ ನೀಡಲಾಗುತ್ತಿದೆ’ ಎಂದು ಹೊರರೋಗಿ ಮಾಣಿಕಪ್ಪ ಹೇಳಿದಾಗ ಖುಷಿ ವ್ಯಕ್ತಪಡಿಸಿದರು. ಹಾಜರಿದ್ದ ಸಿಬ್ಬಂದಿಗೆ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಸೂಚಿಸಿದರು.
‘ಸಾರ್ವಜನಿಕ ಕೆಲಸ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ’
ಹುಣಸಗಿ: ‘ಸರ್ಕಾರಿ ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವನಿಜಕರಿಗೆ ಅನಗತ್ಯ ನೆಪಹೇಳಿ ಕೆಲಸ ವಿಳಂಬ ಮಾಡಬೇಡಿ. ಅವರ ಕುಂದು–ಕೊರತೆಗಳನ್ನು ವಿಚಾರಿಸಿ ಆದಷ್ಟು ಕಾಲಮಿತಿಯೊಳಗೆ ಅವರ ಕೆಲಸಗಳನ್ನು ಮಾಡಿಕೊಡಬೇಕು’ ಎಂದು ಲೋಕಾಯುಕ್ತ ಡಿವೈಎಸ್ಪಿ ಹನುಮಂತ್ರಾಯ ಹೇಳಿದರು.
ಹುಣಸಗಿಯ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ದೂರು, ಕುಂದು–ಕೊರತೆ ಸ್ವೀಕರಿಸುವ ಸಭೆಯಲ್ಲಿ ಅವರು ಮಾತನಾಡಿದರು.
‘ಬಹುತೇಕ ಗ್ರಾಮೀಣ ಭಾಗದ ರೈತರು ತಮ್ಮ ಒಂದು ದಿನದ ದುಡಿಮೆಯನ್ನು ಬಿಟ್ಟು ಕಚೇರಿಗಳಿಗೆ ಬರುತ್ತಾರೆ. ಆದರೆ ಅವರಿಗೆ ಸಣ್ಣಪುಟ್ಟ ಲೋಪಗಳ ಕಾರಣದಿಂದ ಸತಾಯಿಸಿ ಅಲೆದಾಡುವಂತೆ ಮಾಡಬೇಡಿ. ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವಂತಿದ್ದರೆ ಕೂಡಲೇ ಮಾಡಿಕೊಡಿ’ ಎಂದು ಸೂಚನೆ ನೀಡಿದರು. ಈ ಕುರಿತಂತೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ವೃದ್ಧಾಪ್ಯ, ಅಂಗವಿಕಲ ಮಾಸಾಶನ, ಹೊಲದ ದಾಖಲೆಗಳಲ್ಲಿನ ದೋಷಗಳ ತಿದ್ದುಪಡಿ, ಸರ್ವೆ, ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನಕ್ಕೆ ತಂದರು.
ಸಭೆಯಲ್ಲಿ ಲೋಕಾಯುಕ್ತ ಸಿಪಿಐ ಅರುಣ ಮುರುಗುಂಡಿ, ಹನುಮಂತ ಹಾಗೂ ಹುಣಸಗಿ ತಾ.ಪಂ ಇಒ ಬಸವರಾಜಸ್ವಾಮಿ ಹಿರೇಮಠ, ಉಪ ನೋಂದಣಾಧಿಕಾರಿ ಕಿಶನ್ ರಾಠೋಡ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗೆ, ಪಶು ವೈದ್ಯಾಧಿಕಾರಿ ಡಾ. ಮೈಬೂಬಸಾಬ್ ಖಾಜಿ, ಶಿವಶರಣಪ್ಪ, ಕಂದಾಯ ಇಲಾಖೆಯ ವೆಂಕಟೇಶ, ಅಮರೇಶ ಮಾಲಗತ್ತಿ, ಅರವಿಂದ ಖಂಡೇಕರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.