ಯಾದಗಿರಿ: ‘ಪ್ರಬಲ ಜಾತಿಗಳ ದಬ್ಬಾಳಿಕೆಯಿಂದ ಶೋಷಿತರ ಧ್ವನಿ ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು, ಬಹುಸಂಖ್ಯಾತರು ಒಗ್ಗೂಡಿ ಶಕ್ತಿ ಪ್ರದರ್ಶನ ಮಾಡುವ ಸಮಯ ಬಂದಿದೆ’ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ವತಿಯಿಂದ ರಾಜ್ಯದ ಶೋಷಿತ ಸಮುದಾಯಗಳ ಜಾಗೃತಿ ಮಹಾಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಘಟಿತರಾಗಿ ಹೋರಾಡಿದರೆ ಹಿಂದುಳಿದ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ, ಮನುವಾದ ಸಿದ್ಧಾಂತವುಳ್ಳವರು ನಮ್ಮನ್ನು ಆಳುವ ಪ್ರಕ್ರಿಯೆ ಹೀಗೆಯೆ ಮುಂದುವರಿಯಲಿದೆ. ನಾವುಗಳು ತುಳಿತಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಎಚ್.ಕಾಂತರಾಜ ನಡೆಸಿದ ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಜ.28ರಂದು ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆಯೋಜಿಸಿದೆ. ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಶೋಷಿತರ ಬಲ ಪ್ರದರ್ಶನ ಮಾಡಲಾಗುವುದು’ ಎಂದರು.
ಸಂಚಾಲಕ ಆರ್.ಆರ್.ವೆಂಕಟರಾಮಯ್ಯ ಮಾತನಾಡಿ, ‘ಸಮಾವೇಶವು ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಬೇಕು. ಶೋಷಿತ ಸಮುದಾಯಗಳು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಅನೇಕ ಆಯೋಗಗಳ ವರದಿ ಜಾರಿಯಾದಂತೆ ಕಾಂತರಾಜ ವರದಿಯನ್ನು ಜಾರಿಗೊಳಿಸಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಮಾಜಿ ಸದಸ್ಯ ಶರಣಪ್ಪ ಡಿ.ಮಾನೇಗಾರ್, ಮುಖಂಡರಾದ ಮರೆಪ್ಪ ಚಟ್ಟರಕರ್, ಅಪ್ಪಣ್ಣ ಚಿನ್ನಾಕಾರ್, ಸೈದಪ್ಪ ಗುತ್ತೇದಾರ್, ಮೌಲಾಲಿ ಅನಪುರ, ಭೀಮಣ್ಣ ಮೇಟಿ ಮಾತನಾಡಿದರು. ‘ಕಾಂತರಾಜ ವರದಿ ಜಾರಿ ಮಾಡಬೇಕು. ಶೋಷಿತರ ಎಲ್ಲರೂ ಒಟ್ಟಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಬೇಕು’ ಎಂದು ಒಕ್ಕೋರಲಿನಿಂದ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಶಿವಪುತ್ರ ಜವಳಿ, ನಾಗರಾಜ, ಸಿ.ಎಲ್.ರವಿಕುಮಾರ್, ಭೀಮರಾಯ ಠಾಣಗುಂದಿ, ಮಲ್ಲಿಕಾರ್ಜುನ ಗೋಸಿ, ಮಡಿವಾಳಪ್ಪ, ಮಡಿವಾಳಪ್ಪ, ಮಲ್ಲಿಕಾರ್ಜುನ ಕಟ್ಟಿಮನಿ, ಮಲ್ಲಣ್ಣ ಐಕೂರು, ಶಾಂತಪ್ಪ ನಿಡಗುಂದಿ, ಆಂಜನೇಯ ಬಬಲಾದ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.