ಸುರಪುರ: ‘ಮುಸ್ಲಿಂ ಸಮುದಾಯದಲ್ಲಿ ಹಜ್ ಮತ್ತು ಉಮ್ರಾ ಯಾತ್ರೆಗೆ ವಿಶೇಷ ಮಹತ್ವವಿದೆ’ ಎಂದು ಶಿಕ್ಷಕ ಲಕ್ಷ್ಮಣ ಬಿರಾದಾರ ಹೇಳಿದರು.
ಉಮ್ರಾ ಯಾತ್ರೆಗೆ ತೆರಳುತ್ತಿರುವ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಸೋಫಿಸಾಬ್ ಗುತ್ತೇದಾರ್ ಅವರನ್ನು ಮಂಗಳವಾರ ಕುಂಬಾರಪೇಟೆಯ ಗೆಳೆಯರ ಬಳಗದಿಂದ ಸನ್ಮಾನಿಸಿ ಅವರು ಮಾತನಾಡಿದರು.
‘ಮುಸ್ಲಿಂ ಗೆಳೆಯನಿಗೆ ಹಿಂದೂಗಳೆಲ್ಲರೂ ಸೇರಿ ಮಾಡುತ್ತಿರುವ ಈ ಸನ್ಮಾನ ಭಾವೈಕ್ಯತೆಯ ಪ್ರತೀಕ. ಈ ಸೌಹಾರ್ದತೆ ಹೀಗೆ ಇದ್ದರೆ ಎಲ್ಲವೂ ಒಳಿತಾಗುತ್ತದೆ’ ಎಂದರು.
ಸನ್ಮಾನ ಸ್ವೀಕರಿಸಿದ ಸೋಪಿಸಾಬ್ ಗುತ್ತೇದಾರ್ ಮಾತನಾಡಿ, ‘ಬಕ್ರೀದ್ ಸಮಯದಲ್ಲಿ 40 ದಿನದ ಹಜ್ ಯಾತ್ರೆ ಇರುತ್ತದೆ. ವರ್ಷದ ಯಾವುದಾದರೂ ಸಮಯದಲ್ಲಿ ಕನಿಷ್ಟ 15 ದಿನ ಯಾತ್ರೆಗೆ ಹೋಗುವುದಕ್ಕೆ ಉಮ್ರಾ ಎನ್ನುತ್ತಾರೆ. ಯಾತ್ರೆಗೆ ತೆರಳುವುದು, ಮಕ್ಕಾ ಮದೀನಾ ದರ್ಶನ ಮಾಡುವುದು ಜೀವನದ ಪರಮಗುರಿ. ಅಲ್ಹಾನ ಆಶೀರ್ವಾದವಿದ್ದರೆ ಮಾತ್ರ ಯಾತ್ರೆ ಕೈಗೂಡುತ್ತದೆ. ಚಿಕ್ಕವಯಸ್ಸಿನಲ್ಲಿ ನನಗೆ ಈ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ’ ಎಂದರು.
‘ಎಲ್ಲ ಹಿಂದೂ ಸ್ನೇಹಿತರು ನನ್ನನ್ನು ಅತ್ಮೀಯವಾಗಿ ಬೀಳ್ಕೊಡುತ್ತಿರುವುದು ನನ್ನ ಹೃದಯ ತುಂಬಿ ಬಂದಿದೆ. ನಿಮಗೆಲ್ಲ ಒಳ್ಳೆಯದಾಗಲಿ ಎಂದು ಆಲ್ಹಾನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದರು.
ಮಲ್ಲಪ್ಪ ಹುಬ್ಬಳ್ಳಿ, ವೆಂಕಟೇಶನಾಯಕ ಕುಂಬಾರಪೇಟ, ಹಯ್ಯಾಳಪ್ಪ ದೊರಿ, ಬಲಭೀಮನಾಯಕ, ಮಂಜು, ಮಲ್ಲಿಕಾರ್ಜುನ ಚಿಂಚರ್ಕಿ, ಹಣಮಂತ ಬಾಂಬೆ, ಭೀಮು ಕುಂಬಾರ, ಅಬ್ದುಲ ಭಾಷಾ, ಸಿದ್ದಪ್ಪ ಗುಡ್ಡಕಾಯಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.