ADVERTISEMENT

ಪೊಲೀಸರ ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದೆ: ಶಾಸಕ ಕಂದಕೂರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:57 IST
Last Updated 4 ಜುಲೈ 2024, 15:57 IST
ಶರಣಗೌಡ ಕಂದಕೂರು
ಶರಣಗೌಡ ಕಂದಕೂರು   

ಗುರುಮಠಕಲ್ (ಯಾದಗಿರಿ ಜಿಲ್ಲೆ): ‘ನನ್ನ ಮತಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ನಡೆ ಮತ್ತು ಅವರ ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದೆ’ ಎಂದು ಶಾಸಕ ಶರಣಗೌಡ ಕಂದಕೂರ ಅಸಮಾಧಾನ ಹೊರಹಾಕಿದರು.

ಗುರುವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪೊಲೀಸ್‌ ಇಲಾಖೆಯ ವಿರುದ್ಧ ಹರಿಹಾಯ್ದ ಅವರು, ‘ರಾಜೀನಾಮೆ ಪತ್ರ ನೀಡಲು ಸ್ಪೀಕರ್ ಅವರ ಸಮಯ ಕೇಳಿದ್ದೆ’ ಎಂದು ತಿಳಿಸಿದರು.

‘ಗುರುಮಠಕಲ್‌ ಪೊಲೀಸರು ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಮಾಡಿಕೊಂಡಿದ್ದಾರೆ. ಈ ಕುರಿತು ಡಿವೈಎಸ್‌ಪಿ ಅವರಿಗೆ ವಾರದಲ್ಲಿ ಹತ್ತು ಬಾರಿ ಕರೆ ಮಾಡಿ ದೂರಿದ್ದೇನೆ. ಏನು ಕ್ರಮ ಕೈಗೊಂಡಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಅವರು, ಮರಳು ದಂದೆ, ಜೂಜಾಟ, ಮಟ್ಕಾ, ಟ್ರಾಫಿಕ್‌ನಲ್ಲಿ ರಸೀದಿ ನೀಡದೇ ಹಣ ವಸೂಲಿ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ನಾನೂ ಹಲವು ಬಾರಿ ಗುರುಮಠಕಲ್‌ ಪೊಲೀಸ್‌ ಅಧಿಕಾರಿಗಳ ಬಗ್ಗೆ ಡಿವೈಎಸ್‌ಪಿಗೆ ದೂರು ನೀಡಿದ್ದೆ. ಅವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ನಮ್ಮ ಕ್ಷೇತ್ರದಲ್ಲಿ ಪೊಲೀಸ್‌ ಇಲಾಖೆಯೇ ಭ್ರಷ್ಟಾಚಾರದ ಕೇಂದ್ರವಾಗಿದೆ. ನನಗೆ ಪೊಲೀಸ್‌ ಠಾಣೆ ಮತ್ತು ಅಧಿಕಾರಿಗಳ ನಡೆಯೇ ದೊಡ್ಡ ಸಮಸ್ಯೆಯಾಗಿದೆ. ಇಲಾಖೆಯ ನಡತೆಗೆ ಬೇಸತ್ತಿದ್ದೇನೆ. ಇಲಾಖೆ ಕುರಿತು ಈ ರೀತಿ ಮಾತನಾಡುವಾಗ ನನಗೂ ನೋವಾಗುತ್ತದೆ. ಆದರೆ, ಸಮಸ್ಯೆಯ ತೀವ್ರತೆಯ ನೋವು ಅದಕ್ಕಿಂತಲೂ ಹೆಚ್ಚಿನದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.