ADVERTISEMENT

ಹುಣಸಗಿ: ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ತೊಗರಿ ಬೆಳೆಗಾರರು; ಹತ್ತಿ ಬೆಳೆಗೆ ಸಂಕಷ್ಟ

ಭೀಮಶೇನರಾವ ಕುಲಕರ್ಣಿ
Published 6 ಅಕ್ಟೋಬರ್ 2024, 5:08 IST
Last Updated 6 ಅಕ್ಟೋಬರ್ 2024, 5:08 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಬೆಳೆದಿರುವ ತೊಗರಿಬೆಳೆ ಹೂ ಬಿಟ್ಟಿರುವುದು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಬೆಳೆದಿರುವ ತೊಗರಿಬೆಳೆ ಹೂ ಬಿಟ್ಟಿರುವುದು   

ಹುಣಸಗಿ: ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಹಸ್ತ ಮಳೆ ಬೆಳೆಗಳಿಗೆ ಉತ್ತಮವಾಗಿದ್ದು, ತೊಗರಿ ಬೆಳೆದ ರೈತರ ಮುಖದಲ್ಲಿ ಮಂದ ಹಾಸ ಮೂಡಿಸಿದೆ. ಇದರಿಂದಾಗಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಹುಣಸಗಿಯಲ್ಲಿ 44 ಮಿ.ಮೀ., ಕೊಡೇಕಲ್ಲ 31 ಮಿ.ಮೀ. ಮಳೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಣಸಗಿ ವಲಯದಲ್ಲಿ ಒಟ್ಟು 17,000 ಹೆಕ್ಟೇರ್‌ ಪ್ರದೇಶದಲ್ಲಿ ಒಣ ಬೇಸಾಯದ ಭೂಮಿಯಿದ್ದು, 8,500 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಹಾಗೂ 6,000 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಸಿದ್ದಾರ್ಥ್ ಪಾಟೀಲ ಮಾಹಿತಿ ನೀಡಿದರು.

ADVERTISEMENT

ಕೊಡೇಕಲ್ಲ ವಲಯದಲ್ಲಿ 500 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಹಾಗೂ 8,000 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿರುವುದು ಉತ್ತಮ ಫಸಲಿನ ನಿರೀಕ್ಷೆಯಿದೆ ಎಂದು ಕೊಡೆಕಲ್ಲ ಹೋಬಳಿ ಕೇಂದ್ರದ ಕೃಷಿ ಅಧಿಕಾರಿ ರಾಮನಗೌಡ ಪಾಟೀಲ ಮಾಹಿತಿ ನೀಡಿದರು.

ತಾಲ್ಲೂಕಿನ ರಾಜನಕೋಳೂರು, ಕೊಡೇಕಲ್ಲ, ಬಪ್ಪರಗಿ, ಹೊರಟ್ಟಿ, ಮಾಳನೂರು, ಗುಂಡಲಗೇರಾ, ಶ್ರೀನಿವಾಸಪುರ, ಕನಗಂಡನಹಳ್ಳಿ, ಅಮಲಿಹಾಳ, ಕರಿಬಾವಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳು ಮಳೆಯಾಶ್ರಿತ ಜಮೀನು ಹೊಂದಿವೆ. ಆದರೆ ಮಳೆಯ ಕೊರತೆಯಿಂದಾಗಿ ರೈತರು ಮುಗಿಲು ನೋಡುವಂತಾಗಿತ್ತು.

ನಮ್ಮ ಗ್ರಾಮವು ಅತ್ಯಂತ ಮೇಲ್ಭಾದಲ್ಲಿದ್ದು, ಮಳೆಯಾದರೇ ಮಾತ್ರ ಬೆಳೆ ಎಂಬ ಪರಿಸ್ಥಿತಿಯಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ತೊಗರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಮಾರಲಬಾವಿ ಗ್ರಾಮದ ರೈತರಾದ ಸಾಯಬಣ್ಣ ಹೊಸಮನಿ, ಹೊಳೆಪ್ಪ ಕರಿಗೌಡ್ರ, ಹಣಮಂತ್ರಾಯ ನಾಯ್ಕೋಡಿ ಗೌಡಪ್ಪ ಗೊಲ್ಲರ ಸಂತಸ ಹಂಚಿಕೊಂಡರು.

ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ತಾಮ್ರ ರೋಗಕ್ಕೆ ತುತ್ತಾಗಿ ಹತ್ತಿ ಬೆಳೆ ಹಾನಿಯಾಗಿರುವುದು

ಹತ್ತಿ ಬೆಳೆದ ರೈತರಿಗೆ ಸಂಕಷ್ಟ

ಹತ್ತಿ ಬೆಳೆಯು ಆರಂಭದಲ್ಲಿ ಚನ್ನಾಗಿತ್ತು. ಆದರೆ ಮಳೆಯ ಕೊರತೆ ಮತ್ತು ತಾಮ್ರ ರೋಗದಿಂದ ಮಸಾರಿ ಭೂಮಿಯಲ್ಲಿನ ಹತ್ತಿ ಬೆಳೆ ಬಹುತೇಕ ಹಾನಿಗೊಳಗಾಗಿದೆ. ಸಾಲ ಮಾಡಿಕೊಂಡು ಹಾಕಿದ ಹಣದ ಅಲ್ಪ ಭಾಗವೂ ಕೈ ಸೇರದಂತಾಗಿದೆ ಎಂದು ಮಂಜಲಾಪುರ ಹಳ್ಳಿ ಗ್ರಾಮದ ರೈತರಾದ ಪರಮಣ್ಣ ನೀಲಗಲ್ಲ ಅಂಬ್ರೇಶ ಕಂಬಳಿ ಹೇಳಿದರು. ಕಪ್ಪು ಮಣ್ಣಿನಲ್ಲಿ ಬೆಳೆಯಲಾಗಿರುವ ನಮ್ಮದೇ ಹೊಲದ ತೊಗರಿ ಚನ್ನಾಗಿದೆ. ಕೋಡೇಕಲ್ಲ ಭಾಗದಲ್ಲಿ ಬೆಳೆಯಲಾಗಿರುವ ತೊಗರಿ ಬೆಳೆಗೆ ಎರಡು ಬಾರಿ ಗೊಬ್ಬರ ಕೊಡಲಾಗಿದ್ದು ಬೆಳೆ ಚನ್ನಾಗಿದೆ. ಬೆಳೆ ರಕ್ಷಣೆಗಾಗಿ ಕೀಟನಾಷಕ ಸಿಂಪರಣೆಯಲ್ಲಿ ತೊಡಗಿದ್ದೇವೆ ಎಂದು ಕೊಡೇಕಲ್ಲ ಗ್ರಾಮದ ಮಲ್ಲಿಕಾರ್ಜುನ ಜಂಗಳಿ ಹಾಗೂ ಬಸಣ್ಣ ಬಿರಾದಾರ ಧೂಳಪ್ಪ ಹೇಳಿದರು. ಗುಂಡಲಗೇರಾ ಗ್ರಾಮದಲ್ಲಿ ಹತ್ತಿಗೆ ಬಂದ ತಾಮ್ರ ರೋಗದಿಂದ ತತ್ತರಿಸಿದ್ದು ಗಿಡಗಳು ಚಿಕ್ಕದಾಗಿದ್ದು ನೆಟೆ ಒಣಗಿಹೋಗಿದೆ. ದಿಕ್ಕು ತೊಚದಂತಾಗಿದ್ದು ಸರ್ಕಾರ ರೈತರ ನೆರವಿಗೆ ಬರಬೇಕಿದೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ತಿಳಿದಂತಾಗಿದೆ ಎಂದು ಗುಂಡಲಗೇರಾ ಗ್ರಾಮದ ರೈತರಾದ ಶಾಂತಗೌಡ ಕವಿತಾಳ ಚನ್ನಪ್ಪಗೌಡ ಹಾಗೂ ಅಸಮಾಧಾನ ವ್ಯಕ್ತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.