ನಾರಾಯಣಪುರ: ಬಸವಸಾಗರ ಜಲಾಶಯದ 30 ಕ್ರಸ್ಟ್ಗೇಟ್ ತೆರದು ನಿರಂತರವಾಗಿ 3 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ.
ಶುಕ್ರವಾರ ಆಲಮಟ್ಟಿಯ ಲಾಲ್ಬಹದ್ದೂರು ಶಾಸ್ತ್ರಿ ಸಾಗರದಿಂದ 2.90 ಲಕ್ಷ ಕ್ಯುಸೆಕ್ ಪ್ರಮಾಣದಷ್ಟು ನೀರಿನ ಒಳಹರಿವು ಮುಂದಿವರೆದಿದೆ. ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಪ್ರಮಾಣ ಹೆಚ್ಚಾದರೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಆಗ ಆಲಮಟ್ಟಿ ಜಲಾಶಯಕ್ಕೆ ಬರುವ ಒಳಹರಿವು ಹೆಚ್ಚಾಗುತ್ತದೆ. ಅಲ್ಲಿನ ಅಧಿಕಾರಿಗಳು ಬಸವಸಾಗರಕ್ಕೆ ನೀರು ಹರಿಬಿಡುವ ಪ್ರಮಾಣ ಹೆಚ್ಚಿಸುತ್ತಾರೆ. ಒಂದೊಮ್ಮೆ ಒಳಹರಿವು ಕಡಿಮೆಯಾದರೆ ಕಡಿಮೆಗೊಳಿಸುತ್ತಾರೆ.
ಪ್ರತಿ ಗಂಟೆಗೊಮ್ಮೆ ಉಭಯ ಜಲಾಶಯಗಳ ಅಧಿಕಾರಿಗಳು ನದಿಗೆ ನೀರು ಹರಿಸುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಒಂದೊಮ್ಮೆ ಒಳಹರಿವು ಹೆಚ್ಚಾದರೆ ಹೊರ ಹರಿವು ಹೆಚ್ಚಿಸಲಾಗುತ್ತದೆ, ಒಳಹರಿವು ತಗ್ಗಿದರೆ ಹೊರ ಹರಿವು ಕಡಿಮೆಗೊಳಿಸಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಾಶಯ ಗರಿಷ್ಠ 492.25 ಮೀಟರ್ ಎತ್ತರ ಇದ್ದು, 33.313 ಟಿಎಂಸಿ ಅಡಿ ನೀರು ಸಾಮರ್ಥ್ಯ ಇದೆ. ಇಂದು 490.67 ಮೀಟರಗೆ ನೀರು ಬಂದು ತಲುಪಿದ್ದು, 26.545 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ.
ವಿದ್ಯುತ್ ಉತ್ಪಾದನೆ: ಜಲಾಶಯಕ್ಕೆ ಹೊಂದಿಕೊಂಡಿರುವ ಎಂಪಿಸಿಎಲ್ ಜಲವಿದ್ಯುತ್ ಸ್ಥಾವರದಿಂದ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೊಂದಿಗೆ 6 ಸಾವಿರ ಕ್ಯುಸೆಕ್ ನೀರನ್ನು ಬಳಿಸಿ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ನದಿ ಪಾತ್ರದ ಬೋರುಕಾ ಜಲವಿದ್ಯುತ್ ಸ್ಥಾವರದಿಂದಲೂ 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.