ADVERTISEMENT

ಬಂಜಾರ ಸಂಸ್ಕೃತಿ ಶ್ರೀಮಂತ: ಸುಶೀಲಾ ಬಿ

ಯಾದಗಿರಿ: ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 16:08 IST
Last Updated 15 ಫೆಬ್ರುವರಿ 2024, 16:08 IST
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸುಶೀಲಾ ಬಿ ಚಾಲನೆ ನೀಡಿದರು
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸುಶೀಲಾ ಬಿ ಚಾಲನೆ ನೀಡಿದರು    

ಯಾದಗಿರಿ: ‘ಸಂತ ಸೇವಾಲಾಲ್ ಅವರ ಬೋಧನೆಯಂತೆ ಬಂಜಾರರದ್ದು ಕಷ್ಟಪಟ್ಟು ದುಡಿದು, ಬೇಕಾದಷ್ಟೇ ಖರ್ಚು ಮಾಡುವ ಶ್ರಮಿಕ ವರ್ಗವಾಗಿದೆ. ರಾಷ್ಟ್ರದಲ್ಲಿ ಅತಿ ಶ್ರೇಷ್ಠ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಬಂಜಾರ ಸಮುದಾಯ ಹೊಂದಿದೆ’ ಎಂದು ಜಿಲ್ಲಾಧಿಕಾರಿ ಸುಶೀಲಾ ಬಿ. ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಸೇವಾಲಾಲ್ ಜಯಂತ್ಯುತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂತ ಸೇವಾಲಾಲ್ ಅವರು ಮುಂಬೈನ ಸ್ಮಿತ್ ಬಾವೂಚ ಎಂಬಲ್ಲಿ ಸಿಕ್ಕಿಹಾಕಿಕೊಂಡಿದ್ದ ಪೋರ್ಚಗೀಸರ ಹಡಗನ್ನು ತಮ್ಮ ಜಾಣ್ಮೆಯಿಂದ ದಡ ಸೇರಿಸಿದಾಗ ಅವರಿಗೆ ಪೋರ್ಚಗೀಸರು ಮುತ್ತಿನಹಾರ ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಅವರನ್ನು ಮೋತಿವಾಳು ಅಥವಾ ಲಾಲ ಮೋತಿ ಎಂದು ಬಂಜಾರರು ಕರೆಯುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಅರಣ್ಯವಾಸಿಗಳಾಗಿದ್ದ ಲಂಬಾಣಿ ಸಮುದಾಯದ ಅಂಧಕಾರವನ್ನು ದೂರವಾಗಿಸಿದ ಸಂತ ಸೇವಾಲಾಲರು ಜ್ಞಾನಮಾರ್ಗ ತೋರಿದ್ದಾರೆ. ಅವರು ಬಂಜಾರ ಸಮಾಜದ ಶಕ್ತಿಯಾಗಿದ್ದು, ಸಮಾಜಕ್ಕೆ ಬೆಳಕಾಗಿದ್ದಾರೆ. ಅವರು ತೋರಿದ ಮೌಲ್ಯ, ತತ್ವ ಸಿದ್ಧಾಂತ ಮತ್ತು ಸಮಾಜಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ ಮಾತನಾಡಿ, ‘ಲಂಬಾಣಿ ಸಮಾಜಕ್ಕೆ ಲದೇಣಿಯಾ ಎನ್ನುತ್ತಾರೆ. ಹಾಗೆಂದರೆ ಒಂದೆಡೆಯಿಂದ ಇನ್ನೊಂದೆಡೆ ವಲಸೆ ಹೋಗುವುದು ಎಂದರ್ಥ. ನಾವು ಸರ್ಕಾರಿ ಸೇವೆಯಲ್ಲಿರುವವರು ‘ನವೀನ ಬಂಜಾರ’ರಾಗಿದ್ದೇವೆ’ ಎಂದರು.

ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ಜಯಂತಿ ಸಮಿತಿ ಅಧ್ಯಕ್ಷ ದೇವರಾಜ ಎಲ್.ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉತ್ತರಾದೇವಿ ಮಠಪತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ, ಕೃಷಿ ಇಲಾಖೆಯ ರಾಜಕುಮಾರ, ಮುಖಂಡರಾದ ತೇಜರಾಜ ರಾಠೋಡ, ಪರಶುರಾಮ ಚವಾಣ, ಗೋವಿಂದ ಬಿ.ಜಾಧವ್, ಚಂದ್ರಶೇಖರ ಜಾಧವ್, ಕಿಶನ್ ರಾಠೋಡ ಅಲ್ಲಿಪುರ, ರಾಮು ನಾಯಕ, ರವಿ ಮುದ್ನಾಳ, ವಿನೋದ ಕೆ.ರಾಠೋಡ, ಶಂಕರ ರಾಠೋಡ, ವಿಜಯ ಜಾಧವ್ ಜಿನಕೇರಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.