ವಡಗೇರಾ: ಶುಕ್ರವಾರ ಸಂಜೆ ಸುರಿದ ಮಳೆಯಿಂದ ಪಟ್ಟಣದ ವಾರ್ಡ್ ನಂಬರ್ 2ರ ಹೊನ್ನಯ್ಯ ತಾತ ದೇವಸ್ಥಾನದ ಹಿಂದುಗಡೆ ಇರುವ ಮನೆಗಳಿಗೆ ಮತ್ತು ಹೊನ್ನಯ್ಯ ತಾತ ದೇವಸ್ಥಾನದ ಸುತ್ತಲೂ ಮಳೆ ಹಾಗೂ ಚರಂಡಿಯ ಹೊಲಸು ನೀರು ನಿಂತಿದ್ದು ದೇವಸ್ಥಾನದ ಒಳಗಡೆ ಹಾಗೂ ಮನೆಯೊಳಗೆ ಹೋಗಲು ಭಕ್ತರು ಮತ್ತು ಮನೆಯವರು ಹರಸಾಹಸ ಪಡುವಂತಾಯಿತು.
ಪಟ್ಟಣದ ಹಲವು ಬಡವಣೆಗಳಲ್ಲಿಯೂ ಕೂಡಾ ಇಂತದ್ದೇ ಸಮಸ್ಯೆ ಇದೆ ಜೆಜೆಎಂ ಕಾಮಗಾರಿಗಾಗಿ ರಸ್ತೆಯನ್ನು ತೋಡಿ ನೀರಿನ ಪೈಪ್ಗಳನ್ನು ಹಾಕಿದ್ದಾರೆ ಇದರಿಂದಾಗಿ ರಸ್ತೆಯ ನಡುವೆ ಕಂದಕಗಳು ಉಂಟಾಗಿ ಮಳೆಯ ಹಗೂ ಚರಂಡಿಯ ನೀರು ಮನೆಯೊಳಗಡೆ ನುಗ್ಗುತ್ತಿದೆ. ಜೆಜೆಎಂ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ ಎಂದು ಬಡಾವಣೆಯ ನಿವಾಸಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.
ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಕೂಡ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.
ಚರಂಡಿ ರಸ್ತೆ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಚರಂಡಿ ರಸ್ತೆಗಳ ನಿರ್ಮಾಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಒಂದು ವೇಳೆ ನಿರ್ಲಕ್ಷ ಮಾಡಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಗ್ರಾಮ ಪಂಚಾಯಿತಿಗೆ ಬೀಗಮುದ್ರೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಗೌರವಾಧ್ಯಕ್ಷ ಶರಣು ಜಡಿ ಎಚ್ಚರಿಸಿದ್ದಾರೆ.
ವಡಗೇರಾ ಪಟ್ಟಣದ ವಾರ್ಡ್ ನಂಬರ್ 2ರ ಹೊನ್ನಯ್ಯ ತಾತ ದೇವಸ್ಥಾನದ ಹಿಂದುಗಡೆ ಇರುವ ಮನೆಗಳಿಗೆ ಮತ್ತು ಹೊನ್ನಯ್ಯ ತಾತ ದೇವಸ್ಥಾನದ ಸುತ್ತಲೂ ಮಳೆಯ ಹಾಗೂ ಚರಂಡಿಯ ಹೊಲಸು ನೀರು ನಿಂತಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.