ಯಾದಗಿರಿ: ಮಾನಸಿಕ, ದೈಹಿಕ ಸದೃಢರಾಗಲು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು ಎಂದು ಯೋಗ ಗುರು ಸೋಮನಾಥರೆಡ್ಡಿ ಎಲ್ಹೇರಿ ಹೇಳಿದರು.
ನಗರದ ಮೌಲಾಲಿ ಅನಪುರ ಲೇಔಟ್ನಲ್ಲಿ ಬಸವ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.
ಒತ್ತಡದ ಜೀವನದಿಂದ ಮನುಷ್ಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಇದರಿಂದ ಹೊರ ಬರಲು ಯೋಗ, ವ್ಯಾಯಾಮ ಮಾಡಬೇಕು. ಇದರಿಂದ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಡಗೇರಾ ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕರಕಳ್ಳಿ ಮಾತನಾಡಿ, ಮನುಷ್ಯ ಹಾಳಾಗುವುದಕ್ಕೆ ಎಷ್ಟು ಮಾರ್ಗಗಳಿವೆಯೋ ಅಷ್ಟೇ ಮಾರ್ಗಗಳು ಒಳ್ಳೆಯತನಕ್ಕಿವೆ. ಅಲ್ಲದೆ ಸಾಮಾಜಿಕವಾಗಿ ಒಳ್ಳೆಯದನ್ನು ಮಾಡುವ ಸಂಘ– ಸಂಸ್ಥೆಗಳು ಹೆಚ್ಚಾಗಿವೆ. ಅಂಥ ಸಂಘ ಸಂಸ್ಥೆಗಳಲ್ಲಿ ಸೋಮನಾಥರೆಡ್ಡಿಯವರು ನಡೆಸುವ ಬಸವ ಚಾರಿಟಬಲ್ ಟ್ರಸ್ಟ್ ಕೂಡಾ ಉಚಿತವಾಗಿ ಯೋಗ ಶಿಬಿರಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಬಸವಲಿಂಗಮ್ಮ ಸೋಮನಾಥರೆಡ್ಡಿ ಯೋಗಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಗೀತಾ ಗೌಳಿಯವರು ಶಿಬಿರಾರ್ಥಿಗಳಿಗೆ ಯೋಗಾಭ್ಯಾಸ ಹೇಳಿಕೊಟ್ಟರು. ವೇದಿಕೆ ಮೇಲೆ ಐಎಂಎ ಅಧ್ಯಕ್ಷ ಡಾ.ಭಗವಂತ ಅನ್ವರ, ಅಶೋಕ ಗೌಳಿ ಇದ್ದರು.
ಶಿಕ್ಷಕಿ ಲತಾ ಸ್ವಾಗತಿಸಿದರು. ವಕೀಲ ವಿಜಯಕುಮಾರ ನಿರೂಪಿಸಿದರು. ಪುರುಷೋತ್ತಮ ಗುರುಸ್ವಾಮಿ ವಂದಿಸಿದರು. ಯೋಗ ಶಿಬಿರದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.