ಪಶ್ಚಿಮ ಬಂಗಾಳದ ಬಿರ್ಭೂಮ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಕೆಯಾಗಿದ್ದು, ಪ್ರಚಾರ ಬಿರುಸುಗೊಂಡಿದೆ. ಈ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಬಾರಿಯೂ ಶತಾಬ್ದಿ ರಾಯ್ ಅವರನ್ನೇ ಕಣಕ್ಕಿಳಿಸಿದೆ. ಅವರಿಗೆ ಪೈಪೋಟಿ ನೀಡಲು ಬಿಜೆಪಿಯು ದೇಬ್ತನು ಭಟ್ಟಾಚಾರ್ಯ ಅವರನ್ನು ಸ್ಪರ್ಧಿಯಾಗಿಸಿದೆ. ಇವರಿಬ್ಬರ ಜೊತೆಗಿನ ಹಣಾಹಣಿಗೆ ಕಾಂಗ್ರೆಸ್ ಪಕ್ಷವು ಮಿಲ್ಟನ್ ರಶೀದ್ ಅವರನ್ನು ಅಖಾಡಕ್ಕಿಳಿಸಿದೆ. ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಶತಾಬ್ದಿ ಅವರು, 2019ರ ಚುನಾವಣೆಯಲ್ಲಿ 88,917 ಮತಗಳ ಅಂತರದಿಂದ ಬಿಜೆಪಿಯ ದೂದ್ ಕುಮಾರ್ ಮೊಂಡಲ್ ಅವರನ್ನು ಸೋಲಿಸಿದ್ದರು. ಬಂಗಾಳಿ ಚಿತ್ರರಂಗದಲ್ಲಿ ನಟಿ ಹಾಗೂ ನಿರ್ದೇಶಕಿಯಾಗಿ ಹೆಸರು ಮಾಡಿರುವ ಶತಾಬ್ದಿ ಅವರು ಈ ಬಾರಿಯೂ ಗೆಲ್ಲುತ್ತಾರೆಂಬ ವಿಶ್ವಾಸ ಟಿಎಂಸಿ ಮುಖಂಡರದ್ದಾಗಿದೆ. ಬಿಜೆಪಿಯು ಈ ಕ್ಷೇತ್ರಕ್ಕೆ ಆರಂಭದಲ್ಲಿ ಮಾಜಿ ಐಪಿಎಸ್ ಅಧಿಕಾರಿ ದೇಬಶಿಶ್ ಧರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಅವರ ನಾಮಪತ್ರ ತಿರಸ್ಕೃತಗೊಂಡ ಕಾರಣ ದೇಬ್ತನು ಅವರನ್ನು ಕಣಕ್ಕಿಳಿಸಲಾಗಿತ್ತು. ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ದೇಬಶಿಶ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಶಾಸಕರಾಗಿಯೂ ಆಯ್ಕೆಯಾಗಿದ್ದ ರಶೀದ್ ಅವರು ಕಾಂಗ್ರೆಸ್ನ ಬಿರ್ಭೂಮ್ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.