ಉತ್ತರ ಪ್ರದೇಶದ ಹಾಥರಸ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎಸ್ಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯು ಉತ್ತರ ಪ್ರದೇಶದ ಸಚಿವ ಅನೂಪ್ ಪ್ರಧಾನ್ ಅವರನ್ನು ಕಣಕ್ಕಿಳಿಸಿದ್ದು, ಸಮಾಜವಾದಿ ಪಕ್ಷವು ಜಸ್ವೀರ್ ವಾಲ್ಮೀಕಿ ಅವರನ್ನು ಅಖಾಡಕ್ಕಿಳಿಸಿದೆ. 2014 ರಲ್ಲಿ ರಚನೆಯಾಗಿರುವ ಈ ಕ್ಷೇತ್ರ ಬಿಜೆಪಿಯ ಹಿಡಿತದಲ್ಲೇ ಇದೆ. ಕಳೆದ ಚುನಾವಣೆಯಲ್ಲಿ ರಾಜ್ವೀರ್ ಸಿಂಗ್ ದಿಲೆರ್ ಜಯಿಸಿದ್ದರು. ಅವರು ಎಸ್ಪಿ ಅಭ್ಯರ್ಥಿ ರಾಮ್ಜಿ ಲಾಲ್ ಸುಮನ್ ಅವರನ್ನು 2,60,208 ಮತಗಳಿಂದ ಮಣಿಸಿದ್ದರು. ಇಲ್ಲಿ ಮೂರನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. 2020ರ ಅಕ್ಟೋಬರ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದಾಗಿ ಹಾಥರಸ್, ದೇಶದಾದ್ಯಂತ ಸುದ್ದಿಯಾಗಿತ್ತು. ಹಾಥರಸ್, ಇಂಗು ಉತ್ಪಾದನೆಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಇಂಗು ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು ತಮ್ಮ ಮೊದಲ ಆದ್ಯತೆ ಎನ್ನುತ್ತಾ ಎಸ್ಪಿ ಅಭ್ಯರ್ಥಿ ಜಸ್ವೀರ್ ಅವರು ಮತದಾರರ ಬಳಿ ತೆರಳುತ್ತಿದ್ದಾರೆ. ‘ನಾನು ಗೆದ್ದರೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಹಾಗೂ ವ್ಯಾಪಾರವನ್ನು ಉತ್ತೇಜಿಸಲು ತೆರಿಗೆ ವಿನಾಯಿತಿಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎನ್ನುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.