ADVERTISEMENT

ಕ್ಷೇತ್ರ ಮಹಾತ್ಮೆ: ಅಕೋಲಾ (ಮಹಾರಾಷ್ಟ್ರ)

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 23:54 IST
Last Updated 5 ಏಪ್ರಿಲ್ 2024, 23:54 IST
   

ಮಹಾರಾಷ್ಟ್ರದ ಅಕೋಲಾ ಲೋಕಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ‘ಮಹಾಯುತಿ’ ಮೈತ್ರಿಕೂಟವು ಬಿಜೆಪಿಯ ಅನೂಪ್‌ ಧೋತ್ರೆ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ಡಾ. ಅಭಯ್ ಪಾಟೀಲ್‌ ಅವರನ್ನು ಕಾಂಗ್ರೆಸ್‌ ಸ್ಪರ್ಧಿಯನ್ನಾಗಿಸಿದೆ. ಇವರಿಬ್ಬರಿಗೆ ಪೈಪೋಟಿ ನೀಡಲು ವಂಚಿತ್‌ ಬಹುಜನ ಆಘಾಡಿ ಮುಖ್ಯಸ್ಥ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್‌ ಕೂಡ ಅಖಾಡಕ್ಕಿಳಿದಿದ್ದಾರೆ. ಪ್ರಕಾಶ್‌ ಅವರು ಸ್ಪರ್ಧಿಸಿರುವುದರಿಂದ ಕ್ಷೇತ್ರದ ಜಾತ್ಯತೀತ ನಿಲುವಿನ ಮತದಾರರ ಮತಗಳು ಹಂಚಿ ಹೋಗುವ ಸಾಧ್ಯತೆ ಇದೆ ಮತ್ತು ಇದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅನೂಪ್‌ ಧೋತ್ರೆ ಅವರು ಅಕೋಲಾ ಸಂಸದ ಸಂಜಯ್‌ ಧೋತ್ರೆ ಅವರ ಮಗನಾಗಿದ್ದು, ನಾಲ್ಕು ಬಾರಿ ತಂದೆಯ ಕೈ ಹಿಡಿದಿದ್ದ ಕ್ಷೇತ್ರವು ಈ ಬಾರಿ ತಮಗೆ ಒಲಿಯಲಿದೆ ಎಂಬ ದೃಢ ವಿಶ್ವಾಸದಲ್ಲಿದ್ದಾರೆ. ‘ಇಂಡಿಯಾ’ ಒಕ್ಕೂಟದ ಜೊತೆಗೆ ಕೈಜೋಡಿಸುವುದಾಗಿ ಆರಂಭದಲ್ಲಿ ಹೇಳಿದ್ದ ಪ್ರಕಾಶ್‌ ಅವರು ಅಕೋಲಾದಲ್ಲಿ ಸ್ಪರ್ಧಿಸುವ ನಿಲುವು ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ವೈದ್ಯರಾಗಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಹೆಸರು ಮಾಡಿರುವ ಅಭಯ್‌, ಈ ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕ ಹೊಂದಿರುವವರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಅವರನ್ನು ಅಭ್ಯರ್ಥಿಯಾಗಿಸಿದೆ ಮತ್ತು ಗೆಲುವಿನ ನಿರೀಕ್ಷೆಯಲ್ಲಿದೆ. 2019ರಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಸಂಜಯ್‌ ಧೋತ್ರೆ, 2,75,596 ಮತಗಳ ಅಂತರದಿಂದ ಎದುರಾಳಿ ಪ್ರಕಾಶ್‌ ಅಂಬೇಡ್ಕರ್‌ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.