ಮುಖ್ಯಮಂತ್ರಿಯಾಗಿದ್ದಾಗಲೇ ಮಂಡ್ಯದಲ್ಲಿ ತಮ್ಮ ಮಗನನ್ನು ಕಣಕ್ಕೆ ಇಳಿಸಿದ್ದ ಕುಮಾರಸ್ವಾಮಿ ಅವರಿಗೆ ‘ಸಕ್ಕರೆ’ ಸಿಕ್ಕಿರಲಿಲ್ಲ. ‘ಸೀತಾರಾಮ ಕಲ್ಯಾಣ’ದ ಸಿನಿಮಾ ಟಿಕೆಟ್ ಅನ್ನು ಮನೆಮನೆಗೆ ತಲುಪಿಸಿದ್ದರೂ ಅದು ಮತವಾಗಿರಲಿಲ್ಲ. ಹಿರಿಯ ಚಿತ್ರನಟಿ ಸುಮಲತಾ ಅವರು ‘ಮಂಡ್ಯದ ಗಂಡು ಅಂಬರೀಷ್’ ಜಾಗದಲ್ಲಿ ನಿಂತುಕೊಂಡು ತಾವೇ ‘ಮಂಡ್ಯದ ಹೆಣ್ಣು’ ಎಂದು ತೋರಿಸಿದ್ದರು. ಕಾಂಗ್ರೆಸ್ ಜತೆಗೆ ಕೂಡಿಕೆ ಮಾಡಿಕೊಂಡಿದ್ದ ಕುಮಾರಸ್ವಾಮಿಯವರಿಗೆ ‘ಹಸ್ತ’ದವರು ಕೈಕೊಟ್ಟಿದ್ದು ಹೊಸತೇನಲ್ಲ. ಚನ್ನಪಟ್ಟಣ–ರಾಮನಗರ ತಮ್ಮ ಎರಡು ಕಣ್ಣೆಂದು ಹೇಳುತ್ತಿದ್ದ ಕುಮಾರಸ್ವಾಮಿ, ‘ಹಸ್ತ ಸಾಮುದ್ರಿಕೆ’ ಸರಿಯಿಲ್ಲ ಎನ್ನುತ್ತಾ, ಈಗ ‘ಕಮಲ’ ಮುಡಿದಿದ್ದಾರೆ. ಜೆಡಿಎಸ್ನ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ, ಕೆ.ಆರ್. ಪೇಟೆಯಲ್ಲಿ ಮಾತ್ರ ತೆನೆ ಹೊತ್ತ ಮಹಿಳೆ ಗೆದ್ದಿದ್ದಾಳೆ. ಉಳಿದೆಡೆ ‘ಹಸ್ತ’ವೇ ಹಿಡಿದಿದೆ. ಒಂದು ಕಾಲದ ತಮ್ಮ ಪರಮಾಪ್ತ ಚಲುವರಾಯಸ್ವಾಮಿಯವರೇ ಕುಮಾರಸ್ವಾಮಿ ಸೋಲಿಸಲು ವೀಳ್ಯ ಪಡೆದು ಕಣದಲ್ಲಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ಎಲ್ಲ ಪಕ್ಷದ ರಾಜಕಾರಣಿಗಳಿಗೂ ಪರೋಕ್ಷವಾಗಿ ‘ಸ್ಟಾರ್’ಗಿರಿ ತರಲು ನೆರವಾದ ವೆಂಕಟರಮಣೇಗೌಡ ಯಾನೆ ಸ್ಟಾರ್ ಚಂದ್ರು, ಈ ಬಾರಿ ತಮ್ಮ ಸ್ಟಾರ್ ಉಳಿಸಿಕೊಳ್ಳುತ್ತಾರೋ, ಕುಮಾರಸ್ವಾಮಿಯವರ ‘ಸ್ಟಾರ್’ ಬದಲಿಸುತ್ತಾರೋ. . . ಕಬ್ಬಿನ ಸಿಹಿ ಯಾರಿಗೆ. . ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.