ಪುರಾಣಗಳಲ್ಲಿ ರಾಮಾಂಜನೇಯ ಯುದ್ಧ ನಡೆದ ಕಥೆಗಳಿವೆ. ಆದರೆ, ರಾಮ–ಲಕ್ಷ್ಮಣರ ಮಧ್ಯೆ ಬರಿ ಪ್ರೀತಿಯದೇ ಕಥನ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಂದೆ ಮತ್ತು ನಾನು ರಾಮ–ಲಕ್ಷ್ಮಣರ ರೀತಿ ಊರೂರು ತಿರುಗಿ ಪಕ್ಷ ಕಟ್ಟಿ, ಬೆಳೆಸಿದ್ದೆವು ಎಂದು ಸದಾ ಕನವರಿಸುತ್ತಿದ್ದವರೇ ಈಗ ರಾಮನ ವಿರುದ್ಧ ಪರೋಕ್ಷ ‘ಸಮರ’ ಸಾರಿರುವುದು ದಿನಕ್ಕೊಂದು ‘ರಾಮಾಯಣ’ಕ್ಕೆ ದಾರಿಯಾಗಿದೆಯಂತೆ.
ಅಸಲಿ ವಿಷಯ ಏನೆಂದರೆ ಅಂದು ರಾಮ–ಲಕ್ಷ್ಮಣರ ಜತೆಗಿದ್ದ ಹನುಮನ ಸೈನ್ಯ (ಸಂಘ–ಪರಿವಾರ) ಶಿವಮೊಗ್ಗ ಕ್ಷೇತ್ರದ ಲೋಕ ಯುದ್ಧದಲ್ಲಿ ಯಾರ ಕಡೆ ಇದೆ ಎನ್ನುವ ಸಂಶಯಕ್ಕೆ ಉತ್ತರವೇ ಸಿಕ್ಕಿಲ್ಲ. ಕಟ್ಟಾ ಹಿಂದುತ್ವವಾದಿಯಾದ ತನಗೆ ಸಮಸ್ತ ಸೈನ್ಯದ ಬಲವಿದೆ ಎಂದು ಸ್ವತಃ ಬಂಡಾಯಗಾರ ಹೇಳಿಕೊಂಡರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರೇ ಮುಂದೆ ನಿಂತು ಗೆಲ್ಲಿಸಿದ್ದ ‘ಚೆನ್ನಿಗ’ ಹನುಮಂತನೇ ರಾಮ ಪರಿವಾರದ ಬೆನ್ನಿಗೆ ನಿಂತಿರುವುದು ಗಂಟಲಿಗೆ ಬಿಸಿ ತುಪ್ಪ ಸುರಿದುಕೊಂಡ ಅನುಭವವಾಗಿದೆಯಂತೆ.
‘ರಾಷ್ಟ್ರಭಕ್ತರ’ ಪ್ರಚಾರ ಸಭೆಗಳ ಬ್ಯಾನರ್ಗಳಲ್ಲಿ ತಮ್ಮ ಚಿತ್ರದ ಜತೆಗೆ ಪ್ರಧಾನಿ ಚಿತ್ರಗಳನ್ನೂ ಎದ್ದು ಕಾಣುವಂತೆ ಹಾಕಿದ್ದು, ಮೋದಿ–ಅಮಿತ್ ಆಶೀರ್ವಾದ ತಮಗಿದೆ ಎಂದು ಈಶ್ವರಪ್ಪ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಮ ಹಾಗೂ ರಾಮನ ಪರಿವಾರ ನಿಮಗೆ ಟಿಕೆಟ್ ತಪ್ಪಿಸಿದೆ ಎನ್ನುತ್ತೀರಿ. ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದವರ ಕೃಪೆ ನಿಮ್ಮ ಮೇಲಿರುವಾಗ ಕರ್ನಾಟಕದ ರಾಮ ನಿಮಗೆ ಹೇಗೆ ಟಿಕೆಟ್ ತಪ್ಪಿಸಲು ಸಾಧ್ಯ ಎಂಬ ಸಂಘದ ಕಾರ್ಯಕರ್ತರ ಪ್ರಶ್ನೆಗೆ ಉತ್ತರವನ್ನೇ ನೀಡುತ್ತಿಲ್ಲವಂತೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.