ನವದೆಹಲಿ: ಟಿಆರ್ಪಿಗಾಗಿ ಟಿ.ವಿ. ಚಾನಲ್ಗಳಲ್ಲಿ ಪ್ರಸಾರವಾಗುವ ಊಹಾಪೋಹ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ ಒಂದು ದಿನದ ಒಳಗಾಗಿ ಕಾಂಗ್ರೆಸ್ ತನ್ನ ನಿರ್ಧಾರವನ್ನು ಬದಲಿಸಿದೆ. ಇಂದು ಸಂಜೆ 6.30ರಿಂದ ಪ್ರಸಾರವಾಗುವ ಚುನಾವಣೋತ್ತರ ಸಮೀಕ್ಷೆ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದೆ.
ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ಶನಿವಾರ ಸಭೆ ನಡೆಸಿದ ನಂತರ, ಕಾಂಗ್ರೆಸ್ನ ಹಿರಿಯ ನಾಯಕ ಪವನ್ ಖೇರಾ ಈ ನಿರ್ಧಾರ ಪ್ರಕಟಿಸಿದ್ದಾರೆ.
‘ಭಾರತೀಯ ಜನತಾ ಪಾರ್ಟಿ ಹಾಗೂ ಅದರ ವ್ಯವಸ್ಥೆಯನ್ನು ಜನರ ಮುಂದಿಡಲು ಇಂಡಿಯಾ ಒಕ್ಕೂಟ ನಿರ್ಧರಿಸಿದೆ. ಹೀಗಾಗಿ ಇಂದು ಸಂಜೆ ನಡೆಯುವ ಚುನಾವಣೋತ್ತರ ಸಮೀಕ್ಷೆಯ ಚರ್ಚೆಯಲ್ಲಿ ಒಕ್ಕೂಟದ ಎಲ್ಲಾ ಪಕ್ಷಗಳ ಮುಖಂಡರು ಹಾಗೂ ವಕ್ತಾರರು ಪಾಲ್ಗೊಳ್ಳಲಿದ್ದಾರೆ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ಪ್ರಸಕ್ತ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಅಂತಿಮ ಹಂತ ತಲುಪಿದೆ. ಸಂಜೆ 6.30ರ ನಂತರ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಲು ಚುನಾವಣಾ ಆಯೋಗವು ಎಲ್ಲಾ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತ್ತು ರೀಮಲ್ ಚಂಡಮಾರುತ ಸೃಷ್ಟಿಸಿರುವ ಸಮಸ್ಯೆಯಿಂದಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ.
ಪಿಡಿಪಿ ಮುಖ್ಯಸ್ಥರಾದ ಮೆಹಬೂಬಾ ಮುಫ್ತಿ ಅವರೂ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಸಿಪಿಐಎಂ, ಸಿಪಿಐ, ಡಿಎಂಕೆ, ಜೆಎಂಎಂ, ಎಎಪಿ, ಆರ್ಜೆಡಿ, ಶಿವಸೇನಾ (ಯುಬಿಟಿ), ಎನ್ಸಿಪಿ (ಶರದ್ ಪವಾರ್) ಪಕ್ಷಗಳ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಶನಿವಾರ ಸಭೆ ನಡೆಸಿ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.