ಗುರುದಾಸಪುರ/ಶಿಮ್ಲಾ: 1984ರ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದು (ಕಾಂಗ್ರೆಸ್) ಗಲಭೆಕೋರರನ್ನು ರಕ್ಷಿಸಿತು ಎಂದು ಆರೋಪಿಸಿದರು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಪಂಜಾಬ್ನ ಗುರುದಾಸಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ಮೋದಿ ಸಿಖ್ ವಿರೋಧಿ ಗಲಭೆಗಳ ಕಡತಗಳನ್ನು ಹೊರ ತೆಗೆದರು. ತಪ್ಪಿತಸ್ಥರಿಗೆ ಶಿಕ್ಷೆಯ ಖಾತರಿ ನೀಡಿದ್ದು ಕೂಡ ಮೋದಿಯೇ’ ಎಂದು ಹೇಳಿದರು.
ಅದಕ್ಕೂ ಮುನ್ನ ಹಿಮಾಚಲ ಪ್ರದೇಶದಲ್ಲಿ ರ್ಯಾಲಿ ನಡೆಸಿದ ಅವರು, ‘ರಾಜ್ಯದ ಯುವಜನತೆಗಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆಯನ್ನು ಕಾಂಗ್ರೆಸ್ ಈಡೇರಿಸಲಿಲ್ಲ. ಪಕ್ಷವು ರಾಜ್ಯ ಸಿಬ್ಬಂದಿ ನೇಮಕಾತಿ ಆಯೋಗಕ್ಕೆ ಬೀಗ ಹಾಕಿತು’ ಎಂದು ಆರೋಪಿಸಿದರು.
‘ವಿಜಯ ಸಂಕಲ್ಪ ಯಾತ್ರೆ’ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಲ್ಲಿ ಕೋಮುವಾದ, ಜಾತಿವಾದ ಮತ್ತು ಕುಟುಂಬ ರಾಜಕಾರಣ ಸಾಮಾನ್ಯವಾಗಿವೆ’ ಎಂದು ಅಭಿಪ್ರಾಯಪಟ್ಟರು.
‘ಗಡಿಗಳಲ್ಲಿ ವಾಸ ಮಾಡುವ ರಾಜ್ಯದ ಜನರಿಗೆ ಬಲಿಷ್ಠ ಸರ್ಕಾರದ ಬೆಲೆ ಗೊತ್ತು’ ಎಂದು ಹೇಳಿದ ಅವರು, ‘ಬಿಜೆಪಿಯ ಮೂರನೇ ಅವಧಿಗೆ ನಿಮ್ಮ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ನನಗಾಗಿ ಅಥವಾ ನನ್ನ ಕುಟುಂಬಕ್ಕಾಗಿ ಅಲ್ಲ, ಅಭಿವೃದ್ಧಿ ಹೊಂದಿದ ದೇಶಕ್ಕಾಗಿ’ ಎಂದು ಪ್ರತಿಪಾದಿಸಿದರು.
‘ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದುಕೊಳ್ಳುವ ಕಾಂಗ್ರೆಸ್, ಅದನ್ನು ಮುಸ್ಲಿಮರಿಗೆ ನೀಡುತ್ತಿದೆ’ ಎಂದು ಮೋದಿ ಪುನರುಚ್ಚರಿಸಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಸ್ವತಂತ್ರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರು ಆದೇಶಗಳನ್ನು ಪಡೆಯಲು ತಿಹಾರ್ ಜೈಲಿಗೆ ಹೋಗುತ್ತಾರೆನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.