ADVERTISEMENT

ಅಧಿಕಾರಕ್ಕೆ ಬಂದರೆ ಮರುದಿನವೇ ನಾನು ಜೈಲಿನಿಂದ ವಾಪಸ್: ಅರವಿಂದ ಕೇಜ್ರಿವಾಲ್

ಪಿಟಿಐ
Published 13 ಮೇ 2024, 16:02 IST
Last Updated 13 ಮೇ 2024, 16:02 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ‘ಇಂಡಿಯಾ’ ಕೂಟವು ಅಧಿಕಾರಕ್ಕೆ ಬಂದರೆ ತಾವು ಜೂನ್ 5ರಂದು (ಫಲಿತಾಂಶ ಘೋಷಣೆ ಆದ ಮಾರನೆಯ ದಿನ) ತಿಹಾರ್ ಜೈಲಿನಿಂದ ವಾಪಸ್ ಬರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

‘ನಾನು ಜೂನ್ 2ರಂದು ಜೈಲಿಗೆ ಹಿಂದಿರುಗಬೇಕು. ಜೂನ್ 4ರಂದು ನಾನು ಜೈಲಿನಲ್ಲಿ ಚುನಾವಣೆಯ ಫಲಿತಾಂಶ ನೋಡುತ್ತೇನೆ’ ಎಂದು ಹೇಳಿದರು.

ಎಎಪಿಯ ಕೌನ್ಸಿಲರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ‘ತಿಹಾರ್‌ ಜೈಲಿನಲ್ಲಿದ್ದಾಗ ನನ್ನನ್ನು ಅವಮಾನಿಸಲು, ಆತ್ಮಸ್ಥೈರ್ಯ ಕುಸಿಯುವಂತೆ ಮಾಡಲು ಪ್ರಯತ್ನಿಸಲಾಯಿತು’ ಎಂದು ಆರೋಪಿಸಿದರು.

ADVERTISEMENT

‘ಜೈಲಿನ ನನ್ನ ಕೋಣೆಯಲ್ಲಿ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದರ ವಿಡಿಯೊಗಳನ್ನು 13 ಮಂದಿ ಅಧಿಕಾರಿಗಳು ಪರಿಶೀಲಿಸುತ್ತಿದ್ದರು. ವಿಡಿಯೊಗಳನ್ನು ಪ್ರಧಾನಿ ಕಾರ್ಯಾಲಯಕ್ಕೂ ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಮೋದಿಜೀ ನನ್ನ ಮೇಲೆ ನಿಗಾ ಇಟ್ಟಿದ್ದರು. ಮೋದಿ ಅವರಿಗೆ ನನ್ನ ಮೇಲೆ ಏನು ದ್ವೇಷವೋ ಗೊತ್ತಿಲ್ಲ’ ಎಂದು ಹೇಳಿದರು.

‘ಎಎಪಿ ಮುಖಂಡರನ್ನು ಜನ ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ನಮ್ಮ ಕೆಲಸ ಕಂಡು ಬಿಜೆಪಿಯವರಿಗೆ ಭಯ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.