ಚಂಡೀಗಢ: ‘ಭಾರತದ ಚುನಾವಣೆಯು ಸೌಂದರ್ಯ ಸ್ಪರ್ಧೆಯಲ್ಲ. ದೇಶದಲ್ಲಿ ಚುನಾವಣೆಯು ರಾಜಕೀಯ ಪಕ್ಷ ಕೇಂದ್ರಿತವೇ ಹೊರತು ವ್ಯಕ್ತಿಕೇಂದ್ರಿತವಲ್ಲ. ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬರುತ್ತದೆ. ಮೈತ್ರಿಕೂಟದ ನಾಯಕರು ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದವರು ಐದು ವರ್ಷಗಳವರೆಗೂ ಅದೇ ಸ್ಥಾನದಲ್ಲಿ ಇರಲಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ಹೇಳಿದರು.
ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ದೇಶವು ಐದು ವರ್ಷಗಳಲ್ಲಿ ಐವರು ಪ್ರಧಾನಿಗಳನ್ನು ನೋಡಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಚುನಾವಣಾ ರ್ಯಾಲಿಗಳಲ್ಲಿ ಹೇಳುತ್ತಲೇ ಬರುತ್ತಿದ್ದಾರೆ. ಅದಕ್ಕೆ ಜೈರಾಮ್ ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.
‘ಭಾರತ ಪ್ರಕಾಶಿಸುತ್ತಿದೆ’ ಎಂಬ ಪ್ರಚಾರದ ನಡುವೆಯೂ 2004ರಲ್ಲಿ ಯುಪಿಎ ಸರ್ಕಾರ ರಚಿಸಿತ್ತು. ಫಲಿತಾಂಶ ಬಂದ ಮೂರು ದಿನಗಳಲ್ಲಿ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಘೋಷಿಸಲಾಗಿತ್ತು. ಈ ಬಾರಿ ಮೂರು ದಿನವೂ ಬೇಕಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.