ಮಜುಲಿ (ಅಸ್ಸಾಂ): ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೌರವ್ ಗೊಗೊಯಿ ಅವರು, ಜೋರ್ಹತ್ ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಚಾರದ ವೇಳೆ ಜನರು ತಮ್ಮೊಂದಿಗೆ ತೆಗೆದುಕೊಂಡಿರುವ ಸೆಲ್ಫಿಗಳು ಮತಗಳಾಗಿ ಬದಲಾದರೆ, ಬಿಜೆಪಿ ಸಂಸದ ತೊಪನ್ ಕುಮಾರ್ ಗೊಗೊಯಿಗೆ ಸೋಲು ಖಚಿತ ಎಂದಿದ್ದಾರೆ.
ಕಲಿಯಾಬೊರ್ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಗೌರವ್, ಈ ಬಾರಿ ಜೋರ್ಹತ್ನಿಂದ ಕಣಕ್ಕಿಳಿಯುತ್ತಿದ್ದಾರೆ. ಅವರು, ವಿಶ್ವದ ಅತಿದೊಡ್ಡ ನದಿ ದ್ವೀಪವೆನಿಸಿರುವ ಮಜುಲಿಯಲ್ಲಿ ಎರಡು ದಿನ ಪ್ರಚಾರ ನಡೆಸಿದ್ದಾರೆ.
ಬುಧವಾರ ರಾತ್ರಿ ಸಾಂಪ್ರದಾಯಿಕ 'ಚಾಂಗ್ ಘರ್' ಕುಟೀರದಲ್ಲಿ ಉಳಿದುಕೊಂಡ 41 ವರ್ಷದ ಗೌರವ್, ಗುರುವಾರ ಬೆಳಿಗ್ಗೆ ತಮ್ಮ ಪ್ರಚಾರ ತಂಡದೊಂದಿಗೆ ಮಾತುಕತೆ ನಡೆಸಿದರು. ನಂತರ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡರು.
ಈ ವೇಳೆ ಕೆಲವರು ಹೂಗುಚ್ಛ, ಅಪ್ಪುಗೆ ನೀಡಿದರೆ, ಇನ್ನೂ ಕೆಲವರು ಪ್ರೀತಿಯಿಂದ ಮುತ್ತಿಟ್ಟು ಸ್ವಾಗತಿಸಿದರು. ಇನ್ನಷ್ಟು ಮಂದಿ ಸಾಂಪ್ರದಾಯಿಕ 'ಪೇಟ' ನೀಡಿ ಬರಮಾಡಿಕೊಂಡರು. ಬಹುತೇಕ ಯುವಕರು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದೇ ವೇಳೆ ಬೆಂಬಲಿಗರು, 'ಗೌರವ್ ಗೆಲುವು, ಜನರ ಗೆಲುವು', 'ಗೌರವ್ ಗೆಲುವು ಖಚಿತ' ಎಂಬ ಘೋಷಣೆಗಳನ್ನು ಕೂಗಿ, ಉತ್ಸಾಹ ತುಂಬಿದರು.
ಬಳಿಕ ಮಾತನಾಡಿದ ಗೌರವ್, 'ಇಲ್ಲಿನ ಜನರು ತೋರಿದ ಪ್ರೀತಿಯಿಂದ ಭಾವಪರವಶನಾಗಿದ್ದೇನೆ. ನನ್ನೊಂದಿಗೆ ಫೋಟೊ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಖ್ಯೆಯು ಮತವಾಗಿ ಬದಲಾದರೆ, ಬಿಜೆಪಿ ಭಾರಿ ಅಂತರದಿಂದ ಸೋಲು ಅನುಭವಿಸಲಿದೆ' ಎಂದು ಹೇಳಿದ್ದಾರೆ.
'ಬಿಜೆಪಿಯು ಪ್ರತಿ ಚುನಾವಣೆಗೂ ಮುನ್ನ ಸಾಕಷ್ಟು ಭರವಸೆಗಳನ್ನು ನೀಡುತ್ತದೆ. ಆದರೆ, ಅಧಿಕಾರಕ್ಕೇರಿದ ನಂತರ ಯಾವುದನ್ನೂ ಈಡೇರಿಸುವುದಿಲ್ಲ' ಎಂದು ಟೀಕಿಸಿದ್ದಾರೆ.
'ಸರ್ಕಾರಿ ಶಾಲೆಗಳು, ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಔಷಧಿಗಳ ವೆಚ್ಚ ಹೆಚ್ಚಾಗುತ್ತಿದೆ. ಹಣದುಬ್ಬರ ಏರುತ್ತಿದೆ. ರೈತರ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ' ಎಂದೂ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.