ನವದೆಹಲಿ: ಕಾಂಗ್ರೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತೆಲಂಗಾಣದ ಭಾರತ ರಾಷ್ಟ್ರ ಸಮಿತಿ(ಬಿಆರ್ಎಸ್) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ 48 ಗಂಟೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ಸಿರ್ಸಿಲ್ಲಾದಲ್ಲಿ ರಾವ್ ಅವರು ನೀಡಿದ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲದೆ. ಆಕ್ಷೇಪಾರ್ಹ ಮತ್ತು ಮಾನಹಾನಿಕರ ಹೇಳಿಕೆ ಮೂಲಕ ಆಯೋಗದ ಸೂಚನೆಗಳನ್ನೂ ಉಲ್ಲಂಘಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಕೆಸಿಆರ್ ಮೇಲಿನ ಚುನಾವಣಾ ಆಯೋಗದ ನಿರ್ಬಂಧವು ಬುಧವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬಂದಿದೆ.
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಬಳಿಕ ಚುನಾವಣಾ ಪ್ರಚಾರ ನಿರ್ಬಂಧಕ್ಕೊಳಗಾದ 2ನೇ ನಾಯಕ ಕೆ. ಚಂದ್ರಶೇಖರ ರಾವ್ ಆಗಿದ್ದಾರೆ.
ಏಪ್ರಿಲ್ 5ರ ಸುದ್ದಿಗೋಷ್ಠಿಯಲ್ಲಿ ರಾವ್ ನೀಡಿದ ಹೇಳಿಕೆ ಕುರಿತಂತೆ ತೆಲಂಗಾಣ ಕಾಂಗ್ರೆಸ್ ಘಟಕದ ಹಿರಿಯ ಉಪಾಧ್ಯಕ್ಷ ಜಿ ನಿರಂಜನ್ ನೀಡಿದ ದೂರನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ರಾವ್ ಅವರು ಪಕ್ಷದ ಸ್ಟಾರ್ ಪ್ರಚಾರಕರು ಸಹ ಆಗಿದ್ದು, ಮಾದರಿ ನೀತಿ ಸಂಹಿತೆ ಪಾಲಿಸುವ ಮೂಲಕ ಇತರ ನಾಯಕರಿಗೆ ಮಾದರಿ ಆಗಬೇಕಿದೆ ಎಂದು ಆಯೋಗ ಹೇಳಿದೆ.
ರಾವ್ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಆಯೋಗವು ಇಂದು ರಾತ್ರಿ 8 ಗಂಟೆಯಿಂದ ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ರ್ಯಾಲಿಗಳು, ಕಾರ್ಯಕ್ರಮಗಳು, ಸಂದರ್ಶನ, ಮಾಧ್ಯಮಗಳಲ್ಲಿ ಮತದಾರರಿಗೆ ಮನವಿ ಸೇರಿದಂತೆ ಯಾವುದೇ ಚುನಾವಣೆ ಸಂಬಂಧಿತ ಚಟುವಟಿಕೆಯಲ್ಲಿ 48 ಗಂಟೆಗಳ ಕಾಲ ಭಾಗವಹಿಸುವಂತಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.