ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಜೈರಾಮ್ ರಮೇಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಾಸ್ತವ ಮಾಹಿತಿ ಹಂಚಿಕೊಳ್ಳುವಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಇಂದು ಸಂಜೆ (ಜೂ. 2) 7 ಗಂಟೆಯೊಳಗೆ ಮಾಹಿತಿ ನೀಡುವಂತೆ ಆದೇಶಿಸಿದೆ.
ಅಮಿತ್ ಶಾ ಕುರಿತು ಜೈರಾಮ್ ರಮೇಶ್, ‘ಗೃಹ ಸಚಿವರು ದೇಶದಾದ್ಯಂತ 150 ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಇದು ನಿರ್ಲಜ್ಜ ಬೆದರಿಕೆಯಾಗಿದ್ದು, ಬಿಜೆಪಿ ಎಷ್ಟು ಹತಾಶವಾಗಿದೆ ಎಂಬುದನ್ನು ತೋರಿಸುತ್ತದೆ. ಜನರ ಇಚ್ಛೆ ಮೇಲುಗೈ ಸಾಧಿಸುತ್ತದೆ. ಜೂನ್ 4 ರಂದು ಮೋದಿ, ಶಾ ಮತ್ತು ಬಿಜೆಪಿ ಅಧಿಕಾರದಿಂದ ನಿರ್ಗಮಿಸುತ್ತದೆ. ಇಂಡಿಯಾ ಜನಬಂಧನ್ ವಿಜಯಶಾಲಿಯಾಗಲಿದೆ ಇದು ತುಂಬಾ ಸ್ಪಷ್ಟವಾಗಿರಲಿ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು ಮತ್ತು ಸಂವಿಧಾನವನ್ನು ಎತ್ತಿ ಹಿಡಿಯಬೇಕು’ ಎಂದು ಹೇಳಿಕೆ ನೀಡಿದ್ದರು.
‘ಮತ ಎಣಿಕೆ ಪ್ರಕ್ರಿಯೆಯು ಪ್ರತಿಯೊಬ್ಬ ಚುನಾವಣಾಧಿಕಾರಿಯ ಪವಿತ್ರ ಕರ್ತವ್ಯವಾಗಿದೆ. ಈ ರೀತಿಯ ಸಾರ್ವಜನಿಕ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗುತ್ತದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಎಲ್ಲಾ ಅಧಿಕಾರಿಗಳು ಆಯೋಗದ ಡೀಮ್ಡ್ ಡೆಪ್ಯುಟೇಶನ್ ಅಡಿಯಲ್ಲಿದ್ದಾರೆ. ಅವರು ಯಾವುದೇ ನಿರ್ದೇಶನಗಳಿಗಾಗಿ ನೇರವಾಗಿ ಚುನಾವಣಾ ವಿಚಕ್ಷಣಾ ತಂಡವನ್ನು ಸಂಪರ್ಕಿಸುತ್ತಾರೆ. ಅಲ್ಲದೆ ನೀವು ಆರೋಪಿಸಿದಂತೆ ಯಾವುದೇ ಜಿಲ್ಲಾಧಿಕಾರಿ ಅನಗತ್ಯ ಪ್ರಭಾವ ಬೀರಿದ ಬಗ್ಗೆ ವರದಿ ಮಾಡಿಲ್ಲ ಎಂದು ಆಯೋಗ ರಮೇಶ್ ಅವರಿಗೆ ನೀಡಿದ ನೋಟಿಸ್ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.