ADVERTISEMENT

ಎಎಪಿಗೆ ತಕ್ಕ ಪಾಠ ಕಲಿಸಿ: ಮತದಾರರಿಗೆ ಜೆ.ಪಿ.ನಡ್ಡಾ ಮನವಿ

ಪಿಟಿಐ
Published 19 ಮೇ 2024, 10:41 IST
Last Updated 19 ಮೇ 2024, 10:41 IST
   

ಚಂಡೀಗಢ: ಎಎಪಿ ಪಕ್ಷ ಮಾಡುವುದು ಕೊಳಕು ಕೆಲಸ, ಅದಕ್ಕೆ ತಕ್ಕ ಪಾಠ ಕಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಿಡಿಕಾರಿದ್ದಾರೆ.

ಹರಿಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೈಥಾಲ್‌ ಪ್ರದೇಶದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪರಿವಾರವಾದಿ ಪಕ್ಷವಾಗಿ ಬದಲಾಗಿದೆ. ಕಾಂಗ್ರೆಸ್‌ ಜತೆಗೆ ಘಮಂಡಿಯಾ ಘಟಬಂದನ್‌(ಇಂಡಿಯಾ ಒಕ್ಕೂಟ) ಕೂಡ ಭ್ರಷ್ಟಾಚಾರದ ಒಕ್ಕೂಟವಾಗಿದೆ. ಒಕ್ಕೂಟದಲ್ಲಿ ಕೆಲವರು ಜೈಲಿನೊಳಗಿದ್ದಾರೆ, ಇನ್ನೂ ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕೇಜ್ರಿವಾಲ್‌ ಕುರಿತು ಮಾತನಾಡಿದ ನಡ್ಡಾ, ’ಕೆಲವು ವರ್ಷಗಳ ಹಿಂದೆ ಯಾವುದೇ ಪಕ್ಷವನ್ನು ಸ್ಥಾಪಿಸುವುದಿಲ್ಲ, ಚುನಾವಣೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದಿದ್ದರು, ಆದರೆ ನಂತರ ಪಕ್ಷವನ್ನೂ ಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದೂ ಅಲ್ಲದೆ ಕಾಂಗ್ರೆಸ್‌ ಜತೆಗೆ ಎಂದಿಗೂ ಕೈಜೋಡಿಸುವುದಿಲ್ಲ ಎಂದಿದ್ದರು, ಅದು ಆಗಿದೆ. ಯಾವುದೇ ಭ್ರಷ್ಟಾಚಾರ ಎಸಗುವುದಿಲ್ಲ ಎಂದಿದ್ದರು, ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಎಎಪಿಯ ಮೂವರು ಜೈಲಿನಲ್ಲಿದ್ದಾರೆ’ ಎಂದರು.

ADVERTISEMENT

ಅವರು (ಎಎಪಿ) ಒಳ್ಳೆಯ ಮಾತುಗಳನ್ನಾಡಬಹುದು ಆದರೆ ಮಾಡುವುದು ಕೊಳಕು ಕೆಲಸ. ಈಗ ಹೇಳಿ ಇಂತಹ ಜನರಿಗೆ ಪಾಠ ಕಲಿಸುತ್ತೀರಾ? ಅವರನ್ನು ಸೋಲಿಸುವ ಮೂಲಕ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತೀರಾ ಅಥವಾ ಮತ ಹಾಕುವ ಮೂಲಕ ಮುಂದೆ ಬರುವಂತೆ ಮಾಡುತ್ತೀರಾ? ಎಂದರು.

ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನವೀನ್‌ ಜಿಂದಾಲ್‌ ಪರ ನಡ್ಡಾ ಮತಯಾಚಿಸಿದರು. ಹರಿಯಾಣದಲ್ಲಿ ಮೇ 25ರಂದು ಮತದಾನ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.