ADVERTISEMENT

ಪ್ರಚಾರದಲ್ಲಿ ಮಕ್ಕಳ ಬಳಕೆ ಆರೋಪ: FIRನಲ್ಲಿ ಶಾ, ಕಿಶನ್ ಹೆಸರು ಕೈಬಿಟ್ಟ ಪೊಲೀಸ್

ಪಿಟಿಐ
Published 3 ಜೂನ್ 2024, 13:08 IST
Last Updated 3 ಜೂನ್ 2024, 13:08 IST
<div class="paragraphs"><p>ಅಮಿತ್ ಶಾ, ಕಿಶನ್ ರೆಡ್ಡಿ</p></div>

ಅಮಿತ್ ಶಾ, ಕಿಶನ್ ರೆಡ್ಡಿ

   

ಹೈದರಾಬಾದ್: ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಡೆದಿದ್ದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಲಾಗಿದೆ ಎಂದು ಆರೋಪಿಸಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಅವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಜಿ.ನಿರಂಜನ ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಮೇ 1ರಂದು ದೂರು ನೀಡಿದ್ದರು. ಹೈದರಾಬಾದ್‌ನ ಲಾಲ್‌ದವಾಜಾದಿಂದ ಸುಧಾ ಟಾಕೀಸ್‌ವರೆಗೆ ನಡೆದ ಪ್ರಚಾರ ರ‍್ಯಾಲಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ಬಳಸಲಾಗಿತ್ತು. ಈ ಮಕ್ಕಳು ಅಮಿತ್ ಶಾ ಅವರಿದ್ದ ವೇದಿಕೆ ಮೇಲಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು.

ADVERTISEMENT

ಮಕ್ಕಳನ್ನು ಬಳಸಿದ ಆರೋಪದಡಿ ಅಮಿತ್ ಶಾ, ಕಿಶನ್ ರೆಡ್ಡಿ, ಅಭ್ಯರ್ಥಿ ಕೆ.ಮಾಧವಿ ಲತಾ, ಶಾಸಕರಾದ ಟಿ.ರಾಜಾ ಸಿಂಗ್ ಮತ್ತು ಬಿಜೆಪಿ ಮುಖಂಡ ಟಿ.ಯಮನ್ ಸಿಂಗ್‌ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ ಕುರಿತು ಸತ್ಯಾಸತ್ಯತೆ ಅರಿಯುವಂತೆ ನಗರ ಪೊಲೀಸರಿಗೆ ಚುನಾವಣಾ ಆಯುಕ್ತರು ಪತ್ರ ಬರೆದಿದ್ದರು. 

ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇದರಲ್ಲಿ ಅಮಿತ್ ಶಾ ಮತ್ತು ಕಿಶನ್ ರೆಡ್ಡಿ ಅವರ ಪಾತ್ರ ಯಾವುದೂ ಇಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಮೂವರ ಹೆಸರು ಆರೋಪ ಪಟ್ಟಿಯಲ್ಲಿ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.