ADVERTISEMENT

ರೈತರಿಗಾಗಿ ಸಾಲ ಮನ್ನಾ ಮಾಡದ ಮೋದಿ, ತಮಗಾಗಿ ವಿಮಾನ ಖರೀದಿಸಿದ್ದಾರೆ: ಪ್ರಿಯಾಂಕಾ

ಪಿಟಿಐ
Published 3 ಮೇ 2024, 14:56 IST
Last Updated 3 ಮೇ 2024, 14:56 IST
<div class="paragraphs"><p>ಉತ್ತರಪ್ರದೇಶದ ಫತೇಪುರ್‌ ಸಿಕ್ರಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಶುಕ್ರವಾರ ರೋಡ್‌ ಶೋ ನಡೆಸಿದರು</p></div>

ಉತ್ತರಪ್ರದೇಶದ ಫತೇಪುರ್‌ ಸಿಕ್ರಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಶುಕ್ರವಾರ ರೋಡ್‌ ಶೋ ನಡೆಸಿದರು

   

ಪಿಟಿಐ ಚಿತ್ರ

ಆಗ್ರಾ: ಪ್ರಧಾನಿ ಮೋದಿ ತನಗಾಗಿ ವಿಮಾನ ಖರೀದಿಸಿದರು. ಆದರೆ, ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ವಾಗ್ದಾಳಿ ನಡೆಸಿದರು.

ADVERTISEMENT

ಫತೇಪುರ್ ಸಿಕ್ರಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ನಡೆಸಿ ಮಾತನಾಡಿದ ಅವರು, ‘ನಿಮ್ಮ ದಾರಿತಪ್ಪಿಸಿದ ದೇಶದ ಅತ್ಯಂತ ದೊಡ್ಡ ನಾಯಕನನ್ನು ನೀವು ನೋಡಿದ್ದೀರಿ. ಅವರು ಚುನಾವಣೆ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಕೆರಳಿಸಿ, ಮತ ಪಡೆದಿದ್ದರು. ಆದರೆ, ಅವರು ನಿಮಗೆ ಏನನ್ನೂ ನೀಡಲಿಲ್ಲ. ಅವರು ತಮ್ಮ ಶ್ರೀಮಂತ ಸ್ನೇಹಿತರಿಗೆ ಮಾತ್ರ ನೀಡಿದರು’ ಎಂದು ಹೇಳಿದರು.

‘ಮೋದಿ ಒಬ್ಬನೇ ಒಬ್ಬ ರೈತನ ಕಣ್ಣೀರು ಒರೆಸಿದರೇ ಅಥವಾ ಒಬ್ಬ ಬಡವನಿಗೆ ಸಹಾಯ ಮಾಡಿದರೇ? ಅವರು ಕೇವಲ ತಮ್ಮ ಶ್ರೀಮಂತ ಸ್ನೇಹಿತರಿಗಾಗಿ ಸರ್ಕಾರ ನಡೆಸಿದರು, ನೀವು ಕೇವಲ ಐದು ಕೆ.ಜಿ ಪಡಿತರ ಪಡೆಯುವಿರಿ’ ಎಂದು ಹೇಳಿದರು.

‘ಜಗತ್ತನ್ನು ಸುತ್ತುವುದರಲ್ಲಿ ನಿರತರಾಗಿದ್ದ ಮೋದಿ ಅವರು ಎಂದೂ ನಿಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಲಿಲ್ಲ. ಪದೇ ಪದೇ ಅಧಿಕಾರ ಪಡೆಯುವ ಮನುಷ್ಯ ಅಹಂಕಾರಿಯಾಗುತ್ತಾನೆ. ಹತ್ತು ವರ್ಷ ಅಧಿಕಾರ ಅನುಭವಿಸಿದ ನಂತರ ಮೋದಿ ಅಹಂಕಾರಿಯಾಗಿದ್ದಾರೆ’ ಎಂದು ವಾಕ್‌ಪ್ರಹಾರ ನಡೆಸಿದರು.

ರಾಯಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ ಕುರಿತು ಮಾತನಾಡಿದ ಪ್ರಿಯಾಂಕಾ, ‘ದೇಶದ ಜನರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸಲು 4 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡಿದ ನಾಯಕ ರಾಹುಲ್. ಕಳೆದ 10 ವರ್ಷಗಳಲ್ಲಿ ರೈತರು, ಕಾರ್ಮಿಕರಿಗೆ ಆಗಿರುವ ಅನ್ಯಾಯಕ್ಕೆ ಉತ್ತರವಾಗಿ ಕಾಂಗ್ರೆಸ್ ನ್ಯಾಯ ಪತ್ರ ಬಿಡುಗಡೆ ಮಾಡಿದೆ’ ಎಂದಿದ್ದಾರೆ.

ರ‍್ಯಾಲಿಯುದ್ದಕ್ಕೂ ಕಾಂಗ್ರೆಸ್‌ ಬಾವುಟದೊಂದಿಗೆ, ಸಮಾಜವಾದಿ ಪಕ್ಷದ ಬಾವುಟಗಳೂ ರಾರಾಜಿಸಿದವು. ಫತೇಪುರ್‌ ಸಿಕ್ರಿ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.