ADVERTISEMENT

ದ್ವೇಷದ ಪ್ರತಿಪಾದಕರನ್ನು ತಿರಸ್ಕರಿಸಿ: ಸೋನಿಯಾ

ಪಿಟಿಐ
Published 7 ಮೇ 2024, 14:07 IST
Last Updated 7 ಮೇ 2024, 14:07 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ (ಪಿಟಿಐ): ಸುಳ್ಳು ಹೇಳುವವರು ಮತ್ತು ದ್ವೇಷದ ಪ್ರತಿಪಾದಕರನ್ನು ತಿರಸ್ಕರಿಸಿ, ‘ಸಮಾನತೆ ಮತ್ತು ಉಜ್ವಲ ಭವಿಷ್ಯ’ಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಪಕ್ಷದ ನಾಯಕಿ ಸೋನಿಯಾ ಗಾಂಧಿ ಮಂಗಳವಾರ ಜನರಿಗೆ ಮನವಿ ಮಾಡಿದ್ದಾರೆ.

‘ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ಬಲಿಷ್ಠ, ಒಗ್ಗಟ್ಟಿನ ಭಾರತವನ್ನು ನಿರ್ಮಿಸೋಣ’ ಎಂದು ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯವು ಹಿಂದೆಂದೂ ಕಂಡಿಲ್ಲದಂತಹ ಮಟ್ಟವನ್ನು ತಲುಪಿದೆ. ಈ ಸವಾಲುಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉದ್ದೇಶ ಹಾಗೂ ನೀತಿಯಿಂದಾಗಿ ಹುಟ್ಟಿಕೊಂಡಿವೆ ಎಂದು ಆರೋಪಿಸಿದರು.

ADVERTISEMENT

‘ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಅಪಾಯದಲ್ಲಿದ್ದು, ಬಡವರು ಹಿಂದೆಯೇ ಉಳಿದುಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ಒಡಕು ಮೂಡುತ್ತಿರುವ ದೃಶ್ಯವು ನನಗೆ ದುಃಖವನ್ನು ಉಂಟುಮಾಡಿದೆ’ ಎಂದಿದ್ದಾರೆ.

‘ನಾನು ಮತ್ತೊಮ್ಮೆ ನಿಮ್ಮ ಬೆಂಬಲವನ್ನು ಕೇಳುತ್ತೇನೆ. ನಮ್ಮ 'ನ್ಯಾಯ ಪತ್ರ' ಮತ್ತು ಭರವಸೆಗಳು ದೇಶವನ್ನು ಒಂದುಗೂಡಿಸುವ ಗುರಿಯನ್ನು ಹೊಂದಿವೆ. ಅದು ಬಡವರು, ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಕೆಲಸ ಮಾಡುತ್ತವೆ. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧವಾಗಿವೆ’ ಎಂದು ಪ್ರತಿಪಾದಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.