ಜೌನ್ಪುರ (ಉತ್ತರ ಪ್ರದೇಶ): ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಜೌನ್ಪುರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 'ದೇಶದ ಮೇಲೆ ಜಗತ್ತಿಗೆ ಪ್ರಾಬಲ್ಯ ಸಾಧಿಸಲಾಗದಷ್ಟು ಪ್ರಬಲ ಸರ್ಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಬಲ ಸರ್ಕಾರವನ್ನು ಮುನ್ನಡೆಸುವ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಅವಕಾಶ ಈ ಲೋಕಸಭೆ ಚುನಾವಣೆಯಲ್ಲಿ ದೇಶದ ಮುಂದಿದೆ' ಎಂದು ಅವರು ಹೇಳಿದ್ದಾರೆ.
ಜೌನ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ನಾಯಕ ಕೃಪಾಶಂಕರ್ ಪರ ಪ್ರಚಾರ ನಡೆಸಿದ ಮೋದಿ, ಪ್ರಬಲ ಸರ್ಕಾರದ ರಚನೆಗಾಗಿ ಬಿಜೆಪಿಗೆ ಮತ ಹಾಕಲು ವಿನಂತಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ 'ಇಂಡಿಯಾ' ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, 'ಕಾಶಿ ಹಾಗೂ ಅಯೋಧ್ಯೆಯಲ್ಲಿ ನೀವು ನೋಡಿದ್ದೀರಿ. ಈ ಹಿಂದೆ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಆಗೊಮ್ಮೆ ಈಗೊಮ್ಮೆ ದೆಹಲಿ ಹಾಗೂ ಮುಂಬೈ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಈಗ ದೇಶದ ಹಾಗೂ ವಿದೇಶದ ಜನರು ಕಾಶಿ ಹಾಗೂ ಅಯೋಧ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಮೋದಿ ಹೇಳಿದ್ದಾರೆ.
'ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನನ್ನ ಪ್ರತಿಜ್ಞೆಯಾಗಿದೆ. ಮೋದಿ ಹಾಗೂ ಯೋಗಿ ಆದಿತ್ಯನಾಥ್ ಮುಂದಿನ ಐದು ವರ್ಷಗಳಲ್ಲಿ ಪೂರ್ವಾಂಚಲ ಪ್ರದೇಶದ ಚಿತ್ರಣವನ್ನು ಬದಲಾಯಿಸಲಿದ್ದಾರೆ' ಎಂದು ಅವರು ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.