ADVERTISEMENT

LS polls | ಏಕತೆ, ನ್ಯಾಯಕ್ಕಾಗಿ ಹಕ್ಕು ಚಲಾಯಿಸಿ: ಮಲ್ಲಿಕಾರ್ಜುನ ಖರ್ಗೆ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2024, 4:17 IST
Last Updated 25 ಮೇ 2024, 4:17 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಏಕತೆ, ನ್ಯಾಯ ಹಾಗೂ ಪ್ರಮುಖ ದೈನಂದಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಕ್ಕು ಚಲಾಯಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತದಾರರಿಗೆ ಕರೆ ನೀಡಿದ್ದಾರೆ.

‘ನನ್ನ ಪ್ರೀತಿಯ ದೇಶವಾಸಿಗಳೇ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಹೋರಾಟವು ಅಂತಿಮ ಎರಡು ಹಂತಗಳನ್ನು ತಲುಪಿದೆ. ಇಂದು ಆರನೇ ಹಂತದ ಮತದಾನ ನಡೆಯುತ್ತಿದೆ. ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ಗುಂಡಿ ಒತ್ತುವ ಮೊದಲು ಏಕತೆ, ನ್ಯಾಯ ಮತ್ತು ದೈನಂದಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳಿ. ದ್ವೇಷದ ರಾಜಕೀಯದ ವಿರುದ್ಧ ಮತ ಚಲಾಯಿಸಿ’ ಎಂದು ಖರ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನೀವು (ಮತದಾರರು) ಹಲವು ವರ್ಷಗಳಿಂದ ಎದುರಿಸುತ್ತಿರುವ ಭೀಕರ ನಿರುದ್ಯೋಗ ಮತ್ತು ಅನಿಯಂತ್ರಿತ ಹಣದುಬ್ಬರವನ್ನು ಸೋಲಿಸಲು ಸಾಧ್ಯವಾಗುವ ದಿನ ಇದಾಗಿದೆ. ಇಂದು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರಕ್ಷಿಸಲು ಸಾಧ್ಯವಾಗುವ ದಿನವಾಗಿದೆ. ಪ್ರಜಾಪ್ರಭುತ್ವದ ಶಕ್ತಿಯೊಂದಿಗೆ ನೀವು ಸರ್ವಾಧಿಕಾರದ ಅನಿಯಂತ್ರಿತ ಶಕ್ತಿಯನ್ನು ಸೋಲಿಸಲು ಸಾಧ್ಯವಾಗುವ ದಿನವಾಗಿದೆ’ ಎಂದು ಖರ್ಗೆ ತಿಳಿಸಿದ್ದಾರೆ.

ADVERTISEMENT

ಸರ್ವಾಧಿಕಾರ, ಅನ್ಯಾಯ, ದಬ್ಬಾಳಿಕೆಗಾಗಿ ಅಲ್ಲ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಮತ ಚಲಾಯಿಸಬೇಕೆಂದು ಖರ್ಗೆ ಮನವಿ ಮಾಡಿದ್ದಾರೆ.

‘ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ನನ್ನ ಯುವ ಸ್ನೇಹಿತರಿಗೆ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಭಾರತದ ಪ್ರಜಾಪ್ರಭುತ್ವವನ್ನು ನೀವು ಉಳಿಸಬಹುದು. ಕಳೆದ ಐದು ಹಂತಗಳಲ್ಲಿ, ಸರ್ವಾಧಿಕಾರಿ ಶಕ್ತಿಗಳು ದೊಡ್ಡ ಹಿನ್ನಡೆ ಅನುಭವಿಸಿವೆ. ಅವರ (ಬಿಜೆಪಿಗರು) ಕುರ್ಚಿಗಳು ಅಲುಗಾಡುತ್ತಿದ್ದು, ಭಯಪಡುತ್ತಿದ್ದಾರೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಭಾರತದ ಪರಿಸ್ಥಿತಿ ಬದಲಾಗಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.