ಶಿವಮೊಗ್ಗ: 'ಅಪ್ಪ-ಮಕ್ಕಳ (ಯಡಿಯೂರಪ್ಪ ಹಾಗೂ ಪುತ್ರ, ಬಿ.ವೈ. ವಿಜಯೇಂದ್ರ ) ಕುತಂತ್ರದಿಂದ ನನ್ನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ ಇದು ತಾತ್ಕಾಲಿಕ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ' ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಶಪಥ ಮಾಡಿದರು.
ಎಳಸು ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ತಮ್ಮ ಅಪ್ಪನ (ಯಡಿಯೂರಪ್ಪ) ಮಾತು ಕೇಳಿ ಉಚ್ಛಾಟನೆ ಮಾಡಿದ್ದಾರೆ. ಇದು ಪಕ್ಷದ ಕಾರ್ಯಕರ್ತರಿಗೆ ಬಹಳ ನೋವುಂಟು ಮಾಡಿದೆ . ಬಿಜೆಪಿ ಕಟ್ಟಿದ ನಿಮಗೆ ಹೀಗಾಗಬಾರದಿತ್ತು ಎಂದು ಅವರು ನನಗೆ ಹೇಳುತ್ತಿದ್ದಾರೆ. ಬಿಜೆಪಿಗೆ ವಿಜಯೇಂದ್ರನ ಕೊಡುಗೆ ಶೂನ್ಯವೆಂದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಡೂಪ್ಲಿಕೇಟ್ ಬಿಜೆಪಿ ಕಾರ್ಯಕರ್ತ. ಅವರು ಕೆಜೆಪಿಗೆ ಹೋಗಿ ಬಂದಿದ್ದಾರೆ. ರಾಘವೇಂದ್ರ ಸೋತ ಬಳಿಕ ಒಂದು ಸಮಸ್ಯೆ ನಿವಾರಣೆ ಆಗಲಿದೆ. ಲೋಕಸಭೆ ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಇನ್ನೊಂದು ಸಮಸ್ಯೆ ನಿವಾರಣೆ ಆದಂತಾಗಲಿದೆ. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಗೆದ್ದ ಕೂಡಲೇ ವಿಜಯೇಂದ್ರನ ಅಪ್ಪ ಯಡಿಯೂರಪ್ಪ ಬಂದು ಅವರೇ ಬಿಜೆಪಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದರು.
ಅಪ್ಪ ಮಕ್ಕಳ ಷಢ್ಯಂತ್ರದಿಂದ ಬಿಜೆಪಿಯಿಂದ ಹೊರಗೆ ಬಂದಿದ್ದೇನೆ. ನನಗೂ ಈಗ ನಿರಾಳವಾಗಿದೆ ಎಂದು ಹೇಳಿದರು.
ಪಕ್ಷೇತರ ಅಭ್ಯರ್ಥಿ ಆಗಿ ಎರಡು ಕಬ್ಬು ಹಿಡಿದಿರುವ ರೈತನ ಚಿಹ್ನೆ ನನಗೆ ಸಿಕ್ಕಿದೆ ಎಂದರು.
ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ. ಅದು ಈ ಜನುಮದಲ್ಲಿ ಸಾಧ್ಯವಿಲ್ಲ. ಬಿಜೆಪಿಯಿಂದ ಹೊರಗೆ ಬಂದಿದ್ದರೂ ಹಿಂದುತ್ವವಾದಿ ಕಾರ್ಯಕರ್ತರು ದೊಡ್ಡ ಸಂಖ್ಯೆಯ ಬಲವೇ ನನಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.