ADVERTISEMENT

ದುರಾಡಳಿತದ ವಿರುದ್ಧ ಸ್ವಾಭಿಮಾನದ ಯುದ್ಧ: ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
<div class="paragraphs"><p>ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದರು.&nbsp;</p></div>

ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದರು. 

   

 –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಜೋಶಿಯವರ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸುತ್ತಿಲ್ಲ. ಅವರಿಗೆ ಅದೇ ಬೇಕಾಗಿದೆ ಅನಿಸುತ್ತಿದೆ. ಹೀಗಾಗಿ ಈ ದಿಂಗಾಲೇಶ್ವರ ರಾಜಕೀಯ ಪ್ರವೇಶ ಮಾಡಬೇಕಾಯಿತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ವಾಭಿಮಾನದ ಯುದ್ಧ ಆಗಿದೆ...’

ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಈ ರೀತಿ ಘೋಷಿಸಿದ್ದಾರೆ. ಆ ಮೂಲಕ, ಹಾಲಿ ಸಂಸದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ತೊಡೆತಟ್ಟಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ದಿಂಗಾಲೇಶ್ವರ ಶ್ರೀ, ‘ಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಪ್ರಲ್ಹಾದ ಜೋಶಿ ಬದುಕುತ್ತಿದ್ದಾರೆ. ಅವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಶಿಯವರೇ, ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯಲ್ಲ’ ಎಂದು ಕಿಡಿಕಾರಿದರು.

ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿ.ಎಸ್‌. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಮನವಿ ಮಾಡಿದ್ದಾರೆ. ಆದರೆ, ಕೆಲವರು ನನ್ನ ಸ್ಪರ್ಧೆ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್‌ ಕೈವಾಡ ಇದೆಯೆಂದು ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು. ನನ್ನ ವಿರುದ್ಧ ಯಾರೇ ಮಠಾಧೀಶರು ಹೇಳಿಕೆ ನೀಡಿದ್ದರೂ ಅದು ಜೋಶಿಯವರ ಭಯಕ್ಕಷ್ಟೇ ಕೊಟ್ಟ ಹೇಳಿಕೆಯಾಗಿರುತ್ತದೆ’ ಎಂದರು.

‘ಪ್ರಧಾನಿ ಮೋದಿ ಭೇಟಿಗೆ ರಾಜ್ಯದ ಬಿಜೆಪಿ ಸಂಸದರಿಗೆ ಅವಕಾಶ ಕೊಡಲಿಲ್ಲ. ಮೋದಿ ಅವರಿಂದ ತಾನು ದೂರ ಆಗಬಹುದೆಂಬ ಭಯ ಜೋಶಿ ಅವರಿಗೆ ಇದೆ. ನನ್ನ ಗುರಿ ಮುಟ್ಟುವವರೆಗೂ ಇನ್ನು ಮುಂದೆ ಮಾಲೆಯನ್ನು ಧರಿಸಲ್ಲ. ಹೂ ಮಾಲೆ ಸ್ವೀಕರಿಸುವುದಿಲ್ಲ’ ಎಂದು ಶಪಥ ಮಾಡಿದರು.

‘ಎರಡೂ ರಾಷ್ಟ್ರೀಯ ಪಕ್ಷಗಳು ಲಿಂಗಾಯತರಿಗೆ ಅನ್ಯಾಯ ಮಾಡಿವೆ. ನಾನು ಬ್ರಾಹ್ಮಣ ವಿರೋಧಿಯಲ್ಲ, ನಾನು ಬ್ರಾಹ್ಮಣ ಸಮುದಾಯದ ಅಭಿಮಾನಿ. ನಾನು ಭಾವೈಕ್ಯತೆ ಪೀಠದ ಸ್ವಾಮೀಜಿ ಆಗಿರುವುದರಿಂದ ಯಾವುದೇ ಜಾತಿಯನ್ನು ನಾನು ಟೀಕಿಸುವುದಿಲ್ಲ. ಯಾವುದೇ ಜಾತಿಗೂ ಅಭಿಮಾನ ತೋರಿಸುವುದಿಲ್ಲ’ ಎಂದರು.

ಹಾವೇರಿ ಟಿಕೆಟ್‌ ಬಗ್ಗೆಯೂ ಮಾತನಾಡಿದ ದಿಂಗಾಲೇಶ್ವರ ಶ್ರೀ, ‘ಕೆ.ಎಸ್‌. ಈಶ್ವರಪ್ಪ ಅವರ ಪುತ್ರ ಕಾಂತೇಶ್‌ ಕಳೆದ ಒಂದೂವರೆ ವರ್ಷದಿಂದ ಹಾವೇರಿಯಲ್ಲಿ ಸಕ್ರಿಯರಾಗಿದ್ದರು.ಅವರಿಗೆ ಟಿಕೆಟ್‌ ತಪ್ಪಿಸಿರುವುದು ಜೋಶಿ. ಜೋಶಿಯನ್ನು ನಂಬಬೇಡಿ ಎಂದು ನಾನು ಹಿಂದೆಯೇ ಈಶ್ವರಪ್ಪ ಮತ್ತು ಅವರ ಪುತ್ರನಿಗೆ ಹೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ’ ಎಂದು ಹೇಳಿದರು.

‘ನಾನೊಬ್ಬನೇ ತೀರ್ಮಾನಿಸಲು ಆಗಲ್ಲ’

‘ಧಾರವಾಡದಿಂದ ದಿಂಗಾಲೇಶ್ವರ ಶ್ರೀ ಅವರಿಗೆ ಪಕ್ಷದಿಂದ ಟಿಕೆಟ್‌ ನೀಡುವ ವಿಚಾರದಲ್ಲಿ ನಾನು ಏಕಾಂಗಿಯಾಗಿ ತೀರ್ಮಾನಿಸಲು ಆಗುವುದಿಲ್ಲ. ಎಐಸಿಸಿ ಅಧ್ಯಕ್ಷರು ಚುನಾವಣಾ ಸಮಿತಿ ಮುಖ್ಯಮಂತ್ರಿ ರಾಜ್ಯ ಉಸ್ತುವಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ನೀವು ದಿಂಗಾಲೇಶ್ವರ ಶ್ರೀಗಳನ್ನು ಸಂಪರ್ಕಿಸಿದ್ದೀರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ‘ಸ್ವಾಮೀಜಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವರು. ಮೊದಲೇ ಈ ವಿಚಾರ ನಮಗೆ ಗೊತ್ತಿದ್ದರೆ ಸುಲಭವಾಗುತ್ತಿತ್ತು. ಈ ಕುರಿತು ಸ್ಥಳೀಯ ನಾಯಕರ ಜತೆ ಚರ್ಚಿಸುತ್ತಿದ್ದೇನೆ’ ಎಂದರು.

‘ಅಲ್ಲಿ ವಿನೋದ್‌ ಅಸೂಟಿಗೆ ನಾವು ಈಗಾಗಲೇ ಬಿ ಫಾರಂ ನೀಡಿದ್ದೇವೆ. ಸ್ವಾಮೀಜಿಗೆ ಪಕ್ಷದಿಂದ ಟಿಕೆಟ್‌ ನೀಡುವಂತೆ ಕೆಲವರು ಸಲಹೆ ನೀಡಿದ್ದಾರೆ’ ಎಂದೂ ಹೇಳಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.