ADVERTISEMENT

ಸರ್ವಜ್ಞನ ಹುಟ್ಟೂರು ಪ್ರವಾಸಿ ತಾಣವಾಗಿಸುವೆ: ಬಸವರಾಜ ಬೊಮ್ಮಾಯಿ ಭರವಸೆ

ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:17 IST
Last Updated 3 ಏಪ್ರಿಲ್ 2024, 15:17 IST
ಹಂಸಬಾವಿ ಸಮೀಪದ ಅಬಲೂರು ಗ್ರಾಮದಲ್ಲಿ ಚುನಾವಾಣಾ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ಸರ್ವಜ್ಞನ ಮೂರ್ತಿಗೆ ಗೌರವ ಸಲ್ಲಿಸಿದರು
ಹಂಸಬಾವಿ ಸಮೀಪದ ಅಬಲೂರು ಗ್ರಾಮದಲ್ಲಿ ಚುನಾವಾಣಾ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ಸರ್ವಜ್ಞನ ಮೂರ್ತಿಗೆ ಗೌರವ ಸಲ್ಲಿಸಿದರು   

ಅಬಲೂರು(ಹಂಸಬಾವಿ): ಸರ್ವಜ್ಞನ ಹುಟ್ಟೂರನ್ನು ಅಂತರರಾಷ್ಟ್ರೀಯ ಜ್ಞಾನ ಕೇಂದ್ರವನ್ನಾಗಿ ಮಾಡಲಾಗುವುದು. ಕೇಂದ್ರ ಸರ್ಕಾರದ ಸಹಕಾರದಿಂದ ಈ ಊರನ್ನು ಪ್ರವಾಸಿ ತಾಣವನ್ನಾಗಿಸಿ ಇಡೀ ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತೇನೆ ಈ ಎಲ್ಲ ಕಾರ್ಯಗಳನ್ನು ಮಾಡಲು ನನಗೆ ಮತದಾರ ಆಶೀರ್ವಾದ ಮಾಡಬೇಕು ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಗೆ ಸಮೀಪದ ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಮಾಡಿ ಮಾತನಾಡಿ, ನಾನು ಮುಖ್ಯಮಂತ್ರಿ ಆಗಿದ್ದಾಗ ಸರ್ವಜ್ಞನ ಪ್ರಾಧಿಕಾರ ರಚನೆಗೆ ₹25 ಕೋಟಿ ನೀಡಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ವಾಪಸ್ ಪಡೆದುಕೊಂಡಿತು. ಇವರು ಸರ್ವಜ್ಞನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

‘ನಮ್ಮ ಶಿಗ್ಗಾವಿ ಕ್ಷೇತ್ರದಲ್ಲಿ ಕನಕದಾಸ ಹುಟ್ಟಿದ್ದಾರೆ. ಅವರ ಬಗ್ಗೆಯೂ ಅಷ್ಟೊಂದು ಪ್ರಚಾರ ಇರಲಿಲ್ಲ. ನಾನು ₹24 ಕೋಟಿ ಖರ್ಚು ಮಾಡಿ ಕೋಟೆ, ಅರಮನೆ ಅಭಿವೃದ್ಧಿ ಮಾಡಿದೆ. ಅದೆ ರೀತಿ ಸರ್ವಜ್ಞನ ಊರನ್ನು ಅಭಿವೃದ್ಧಿ ಪಡೆಸಬೇಕೆಂಬ ಬಯಕೆ ನನ್ನದು ಎಂದರು.

ADVERTISEMENT

ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ಬೆವರಿನ ಹಣ ಬೇಕಾಬಿಟ್ಟಿ ಖರ್ಚು ಮಾಡಿ ಯಾವುದೇ ಅಭಿವೃದ್ಧಿ ಕಾರ್ಯ ಆಗದಂತೆ ಮಾಡಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೂ ಅಭಿವೃದ್ಧಿ ಮಾಡಲು ಹಣ ಇಲ್ಲ. ಈ ಕರ್ನಾಟಕಕ್ಕೆ ಬರೇ ಬರ ಬಂದಿಲ್ಲ. ಹಣದ ಬರ, ಅಭಿವೃದ್ಧಿಗೆ ಬರ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೊಮ್ಮೆ ಬರ ಗ್ಯಾರೆಂಟಿ ಎಂದು ಟೀಕಿಸಿದರು.

ಈ ವೇಳೆ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್, ತಾಲ್ಲೂಕು ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಡಿ.ಎಂ.ಸಾಲಿ, ಎನ್‌ ಎಂ. ಈಟೇರ, ಲಿಂಗರಾಜ ಚಪ್ಪರದಹಳ್ಳಿ, ಎಸ್. ಎಸ್.ಪಾಟೀಲ, ದೊಡ್ಡಗೌಡ ಪಾಟೀಲ, ಸೃಷ್ಠಿ ಪಾಟೀಲ, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.