ADVERTISEMENT

ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್‌ ವಾರ್

ಕಾಂಗ್ರೆಸ್‌ ಟಿಕೆಟ್‌ಗಾಗಿ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರ ಆರೋಪ, ಪ್ರತ್ಯಾರೋಪ

ಬಸವರಾಜ ಹವಾಲ್ದಾರ
Published 22 ಮಾರ್ಚ್ 2024, 5:41 IST
Last Updated 22 ಮಾರ್ಚ್ 2024, 5:41 IST
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಸ್ಟ್‌ಗಳು
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಸ್ಟ್‌ಗಳು   

ಬಾಗಲಕೋಟೆ: ಕಾಂಗ್ರೆಸ್‌ ಟಿಕೆಟ್‌ಗಾಗಿ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಇಳಿದಿದ್ದಾರೆ. ಟಿಕೆಟ್‌ ನೀಡಲೇಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

ಬಾಗಲಕೋಟೆ ಹೊಸ ಬೆಳಕು ಎಂಬ ಪೇಜ್‌ನಲ್ಲಿ ‘ಕಾಂಗ್ರೆಸ್‌ ಹೈಕಮಾಂಡ್ ಈ ಹೆದರಿಕೆಗಳಿಗೆ ಮಣಿದು ಟಿಕೆಟ್‌ ಬದಲಾಯಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ‘ ಎಂದು ಸಂಯುಕ್ತಾ ಪಾಟೀಲ ಅವರ ಡಿಪಿ ಅಳವಡಿಸಿರುವ ಪೇಜ್‌ನಲ್ಲಿ ಕಾಂಗ್ರೆಸ್‌ ನಾಯಕರಿಗೇ ಎಚ್ಚರಿಕೆ ನೀಡಲಾಗಿದೆ.

ಇನ್ನೊಂದು ಪೋಸ್ಟ್‌ನಲ್ಲಿ ‘ಈ ಹಿಂದೆ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆ, ಪದವೀಧರ, ಶಿಕ್ಷಕರ ಕ್ಷೇತ್ರಗಳಲ್ಲಿ ಅನ್ಯಾಯವಾದಾಗ ಧ್ವನಿ ಎತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂಬುದನ್ನು ಹೇಳಲಾಗಿದೆ. ಹಾಗೆಯೇ ಈಗ ಸಂಯುಕ್ತಾ ಪಾಟೀಲ ಅವರಿಗೆ ಎಂಪಿ ಅವಕಾಶ ನೀಡೋಣ ಎಂಬ ಸಲಹೆಯೂ ಇದೆ.

ADVERTISEMENT

‘ಇಂದಿನ ಪರಿಸ್ಥಿತಿಗೆ ನಮ್ಮ ಪಕ್ಷದಲ್ಲಿರುವ ಆಂತರಿಕ ಒಳಪಂಗಡ ಮಾಡಿಕೊಂಡಿದ್ದೆ ಕಾರಣ. ಪಕ್ಷೇತರರಾಗಿ ಸ್ಪರ್ಧಿಸಿ ನಮ್ಮ ತಾಕತ್ತು ಏನು ಎಂದು ತೋರಿಸಬೇಕು’ ಎಂದು ಬೆಂಬಲಿಗರೊಬ್ಬರು ಆಗ್ರಹಿಸಿದ್ದಾರೆ.

‘ತಡವಾದರೂ ಅಂತಿಮ ಜಯ ನಮ್ಮದೇ ಆಗಿರಲಿದೆ. ಜೈ ವೀಣಾ ಕಾಶಪ್ಪನವರ. ನಾವು ನಿಮ್ಮೊಂದಿಗೆ ನಿಲ್ಲಲಿದ್ದೇವೆ’ ಎಂದು ಬೆಂಬಲಿಗರು ಇನ್ನೂ ಆಶಾವಾದ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ತಪ್ಪುವ ಆತಂಕದಲ್ಲಿರುವ ವೀಣಾ ಕಾಶಪ್ಪನವರ, ಅವರ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ, ಸಂಯುಕ್ತಾ ಪಾಟೀಲ ಅವರಿಗೆ ಟಿಕೆಟ್‌ ನೀಡಿರುವುದನ್ನು ಪ್ರಶ್ನಿಸಿದ್ದಾರೆ. ತಮಗೆ ಟಿಕೆಟ್ ಸಿಗದಿರುವುದಕ್ಕೆ ವೀಣಾ ಕಾಶಪ್ಪನವರ ಕಣ್ಣೀರಿಟ್ಟಿದ್ದಾರೆ. ಟಿಕೆಟ್‌ಗಾಗಿ ಕೈತಪ್ಪಿರುವುದು ಹೆಚ್ಚು–ಕಡಿಮೆ ಅವರಿಗೆ ಖಚಿತವಾದಂತಿದೆ.

ಇನ್ನೊಂದೆಡೆ ಟಿಕೆಟ್‌ ಸಿಕ್ಕ ಸುಳಿವು ಸಿಕ್ಕಿರುವ ಸಂಯುಕ್ತಾ ಪಾಟೀಲ, ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದಾರೆ. ಶಾಸಕರಾದ ಜೆ.ಟಿ. ಪಾಟೀಲ, ಎಚ್‌.ವೈ. ಮೇಟಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.