ADVERTISEMENT

ವಿಜಯಪುರ ಲೋಕಸಭಾ ಕ್ಷೇತ್ರ: ಕುತೂಹಲ ಮೂಡಿಸಿದ ‘ಬಲ’ ಪ್ರಯೋಗ

ಬಸವರಾಜ ಸಂಪಳ್ಳಿ
Published 29 ಏಪ್ರಿಲ್ 2024, 23:28 IST
Last Updated 29 ಏಪ್ರಿಲ್ 2024, 23:28 IST
   

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಎಂಟು ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಈ ಹಿಂದಿನ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್‌, ಬಂಜಾರ ಸಮಾಜಕ್ಕೆ ಟಿಕೆಟ್‌ ನೀಡಿತ್ತು. ಇದರಿಂದ ಬಿಜೆಪಿಯ ರಮೇಶ ಜಿಗಜಿಣಗಿ ಅವರು ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮಾಜಗಳ ಮತಗಳ ಕ್ರೋಡೀಕರಣದಿಂದ ಸುಲಭವಾಗಿ ಸತತ ಗೆಲುವು ದಾಖಲಿಸಿದರು. ಈ ಸಲ ಕಾಂಗ್ರೆಸ್‌ ತನ್ನ ವರಸೆ ಬದಲಿಸಿದೆ.

ಜಿಲ್ಲೆಯಲ್ಲಿ ‘ಎಡಗೈ’ (ಮಾದಿಗ) ಸಮಾಜಕ್ಕಿಂತ ಬಹುಸಂಖ್ಯೆಯಲ್ಲಿರುವ ‘ಬಲಗೈ’ ಸಮಾಜದ (ಚಲುವಾದಿ) ಮುಖಂಡ ರಾಜು ಆಲಗೂರ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಜಿಗಜಿಣಗಿ ‘ಬಲ’ ಕುಗ್ಗಿಸಲು ಕಾಂಗ್ರೆಸ್‌ ತಂತ್ರ ಹೆಣೆದಿದ್ದು, ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬುದೇ ಕುತೂಹಲ.

ADVERTISEMENT

‘ಎಸ್‌ಸಿ ಮೀಸಲು ಕ್ಷೇತ್ರ, ಯಾರೇ ಆಯ್ಕೆಯಾದರೂ ನಮಗೇನು ಪ್ರಯೋಜನ’ ಎಂಬ ಪ್ರಬಲವರ್ಗದವರ ನಾಯಕರು, ಮತದಾರರ ಉದಾಸೀನತೆಯು ಕಣದಲ್ಲಿ ಕಂಡುಬರುತ್ತಿದೆ. ಪ್ರಬಲವರ್ಗದವರ ಲಿಂಗಾಯತ ಸಮಾಜದ ಒಲವು ಹೊಂದಿರುವ ಬಿಜೆಪಿಗೆ ಇದರ ಲಾಭ ಹೆಚ್ಚು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ. ಆದರೆ, ಕಾಂಗ್ರೆಸ್‌ನ ಐವರು ಲಿಂಗಾಯತ ಶಾಸಕರದ್ದು ಪಾತ್ರ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಪ್ರಧಾನಿ ಮೋದಿ ನಮ್ಮ ಸಮಾಜಕ್ಕೆ(ತೇಲಿ) ಸೇರಿದವರು’ ಎಂಬ ಕಾರಣಕ್ಕೆ ಬಿಜೆಪಿ ಬೆನ್ನಿಗೆ ಪ್ರಬಲವಾಗಿ ನಿಂತಿರುವ ಜಿಲ್ಲೆಯ ಲಿಂಗಾಯತ ಗಾಣಿಗ ಸಮಾಜದ ವೋಟುಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಯತ್ನ ನಡೆಸಿದೆ. ಚುನಾವಣೆ ಹೊಸ್ತಿಲಿನಲ್ಲಿ ಗಾಣಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಲೋಣಿ ಅವರಿಗೆ ಜಿಲ್ಲಾ ಕಾಂಗ್ರೆಸ್‌ ಚುಕ್ಕಾಣಿ ನೀಡಿ, ಮತ ಸೆಳೆಯಲು ಮುಂದಾಗಿದೆ.

ಸಚಿವ ಎಂ.ಬಿ.ಪಾಟೀಲ ಮುಂದಾಳತ್ವದಲ್ಲಿ ಈ ಬಾರಿ ಕಾಂಗ್ರೆಸ್‌ ಸಚಿವರು, ಶಾಸಕರು, ಇನ್ನುಳಿದ ಮುಖಂಡರು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ ರಾಜಕೀಯವಾಗಿ, ಆರ್ಥಿಕವಾಗಿ ಹೆಚ್ಚು ಪ್ರಬಲವಾಗಿದೆ. ಪ್ರಚಾರದಲ್ಲಿ ಒಗ್ಗಟ್ಟು, ಹುಮಸ್ಸು ಹೆಚ್ಚಿದೆ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಪ್ರಬಲ ಕಾರ್ಯಕರ್ತರ ಪಡೆ ಹೊಂದಿದೆ. ಆದರೆ, ಸ್ಥಳೀಯ ಮುಖಂಡರು, ನಾಯಕರು ಶಕ್ತಿ ಕಳೆದುಕೊಂಡು ದುರ್ಬಲವಾಗಿದ್ದಾರೆ. ಒಗ್ಗಟ್ಟಿನ ಕೊರತೆಯೂ ಎದ್ದು ಕಾಣುತ್ತಿದೆ, ಪ್ರಚಾರವೂ ಮಂಕಾಗಿದೆ.

ಹಾವು–ಮುಂಗುಸಿಯಂತಿದ್ದ ಸಂಸದ ರಮೇಶ ಜಿಗಜಿಣಗಿ ಮತ್ತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನಡುವಿನ ವೈಮನಸ್ಸು ಕರಗಿದೆ. ಪರಸ್ಪರ ಒಂದಾಗಿರುವುದು ಚುನಾವಣೆಯಲ್ಲಿ ಬಿಜೆಪಿಗೆ ವರವಾಗಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಯತ್ನಾಳ ಅವರ ಬೈಯ್ದಾಟದ ಭಾಷಣವು ಬಿಜೆಪಿಗೆ ಮತ ತಂದುಕೊಡುತ್ತದೆಯೇ ಅಥವಾ ಹಾನಿ ಮಾಡುತ್ತದೆಯೋ ಎಂಬ ಪ್ರಶ್ನೆಗೆ ಸುಲಭವಾಗಿ ಉತ್ತರ ಸಿಗುವುದು ಕಷ್ಟ.

ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆಯಲ್ಲಿ ಕಾಂಗ್ರೆಸ್‌, ಮೋದಿ ಮೋಡಿಯ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಜೆಡಿಎಸ್‌–ಬಿಜೆಪಿ ಮೈತ್ರಿ ವೇದಿಕೆಗೆ ಸೀಮಿತವಾಗಿದೆ. ದಿನದಿಂದ ದಿನಕ್ಕೆ ಪ್ರಚಾರ ರಂಗೇರುತ್ತಿದ್ದು, ಕುತೂಹಲ ಹೆಚ್ಚುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.