ADVERTISEMENT

ಭ್ರಷ್ಟರ ತೊಳೆಯುವ ವಾಷಿಂಗ್‌ ಮಿಷನ್‌ ಬಿಜೆಪಿ: ಖರ್ಗೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2024, 0:15 IST
Last Updated 2 ಮೇ 2024, 0:15 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಯಾದಗಿರಿ: ‘ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿಯವರು ಕರೆದುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ತೊಡೆಯ ಮೇಲೆ ಭ್ರಷ್ಟರು ಬಂದು ಕುಳಿತಿದ್ದಾರೆ. ಬಿಜೆಪಿ ಭ್ರಷ್ಟರನ್ನು ತೊಳೆಯುವ ವಾಷಿಂಗ್‌ ಮಿಷನ್‌ ಆಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಸಭಾ ಸದಸ್ಯರು, ಸಚಿವರನ್ನಾಗಿ ಮಾಡಿದ್ದಾರೆ. ಕಳಂಕ‌ ಇದ್ದ ಮನುಷ್ಯ ಬಿಜೆಪಿ ಸೇರಿದ ಬಳಿಕ ಬೆಳ್ಳಗಾಗಿ ಹೋಗುತ್ತಾರೆ. ಮೋದಿ ಅವರು, ಬೆರಳು ಕೊಟ್ಟರೆ ಮನುಷ್ಯನನ್ನು ನುಂಗುವವರಾಗಿದ್ದಾರೆ’ ಎಂದು ದೂರಿದರು.

ಮೋದಿ ಪೂಜಾರಿನಾ?: ‘ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದರೂ ಮಲ್ಲಿಕಾರ್ಜುನ ಖರ್ಗೆಯವರು ಬಂದಿಲ್ಲ ಎಂದು ಮೋದಿ ದೂರುತ್ತಿದ್ದಾರೆ. ಮೋದಿಯವರು ಪೂಜಾರಿನಾ’ ಎಂದು ಖರ್ಗೆ ಪ್ರಶ್ನಿಸಿದರು.

ADVERTISEMENT

‘ತಾವೇ ಮುಂದೆ ನಿಂತು ಪೂಜೆ ಸಲ್ಲಿಸಿದರು. ವೋಟ್‌ಗಾಗಿ ರಾಮನ ಹೆಸರು ಬಳಕೆ ಮಾಡಿಕೊಂಡವರು ಬಿಜೆಪಿಯವರು’ ಎಂದು ಟೀಕಿಸಿದರು.

‘ನಿಜಾಮನ ಕಾಲದಲ್ಲೂ ಮಹಿಳೆಯರ ಮಂಗಳಸೂತ್ರ ತೆಗೆಯಲು ಆಗಲಿಲ್ಲ. ಈಗ ಪ್ರಜಾಪ್ರಭುತ್ವವಿದೆ. ಮೋದಿಯವರ ಸರ್ವಾಧಿಕಾರಿ ಧೋರಣೆ ನಡೆಯಲ್ಲ. ಅವರಿಗೆ ಬುದ್ಧಿಭ್ರಮಣೆ ಆಗಿದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

‘ಅಕ್ಕಿ ಕೊಡಿ ಎಂದರೆ, ಅಂಗಡಿಯಲ್ಲಿ ಕೇಕ್‌ ಜಾಸ್ತಿ ಇದೆ. ಅದನ್ನು ತಿನ್ನಿ ಎನ್ನುವ ಮಾತುಗಳನ್ನು ಪ್ರಧಾನಿ ಆಡುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.