ADVERTISEMENT

ದೀಕ್ಷಿತ್‌ಗೆ ‘ಭಾಗ್ಯಲಕ್ಷ್ಮಿ’ಯಾದ ಬೃಂದಾ ಆಚಾರ್ಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 23:58 IST
Last Updated 7 ಡಿಸೆಂಬರ್ 2023, 23:58 IST
ನಟಿ ಬೃಂದಾ ಆಚಾರ್ಯ -ಪ್ರಜಾವಾಣಿ ಚಿತ್ರ
ನಟಿ ಬೃಂದಾ ಆಚಾರ್ಯ -ಪ್ರಜಾವಾಣಿ ಚಿತ್ರ   

ವರ್ಷಗಳ ಹಿಂದೆ ‘‌ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರದ ಪೋಸ್ಟರ್‌ ಸದ್ದು ಮಾಡಿತ್ತು. ಅದಾದ ಬಳಿಕ ಯಾವ ಅಪ್‌ಡೇಟ್‌ಗಳನ್ನು ನೀಡದ ಚಿತ್ರತಂಡ ಸದ್ದುಗದ್ದಲವಿಲ್ಲದೇ ಒಂದು ಭಾಗದ ಚಿತ್ರೀಕರಣ ಪೂರೈಸಿದೆ.

ರಂಗಿ ತರಂಗ, ಅವನೇ ಶ್ರೀಮನ್ನಾರಾಯಣದಂತಹ ಚಿತ್ರಗಳನ್ನು ನೀಡಿದ್ದ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಅಜಯ್‌ ರಾವ್‌ ನಾಯಕ ಎಂದು ಮೊದಲು ಘೋಷಿಸಲಾಗಿತ್ತು. ಕಾರಣಾಂತರಗಳಿಂದ ಇದೀಗ ಆ ಜಾಗಕ್ಕೆ ದೀಕ್ಷಿತ್‌ ಶೆಟ್ಟಿ ಬಂದಿದ್ದಾರೆ. ನಟಿ ಬೃಂದಾ ಆಚಾರ್ಯ ದೀಕ್ಷಿತ್‌ಗೆ ಜೋಡಿಯಾಗಿದ್ದಾರೆ. 

ರಕ್ಷಿತ್‌ ಶೆಟ್ಟಿಯವರ ಸಿನಿಮಾಗಳಿಗೆ ವಿಎಫ್‌ಎಕ್ಸ್‌ ಮಾಡುವ, ಆ ತಂಡದ ಭಾಗವಾಗಿರುವ ಅಭಿಷೇಕ್‌ ಎಂ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದ ಪೋಸ್ಟರ್‌ ನೆಟ್‌ಫ್ಲಿಕ್ಸ್‌ನ ಜನಪ್ರಿಯ ‘ಮನಿಹೈಸ್ಟ್‌’ ವೆಬ್‌ಸರಣಿ ನೆನಪಿಸಿತ್ತು. ‘ಬ್ಯಾಂಕ್‌ ದರೋಡೆಗೆ ಸಂಬಂಧಿಸಿದ ಕಥೆ. ಇದೊಂದು ಥ್ರಿಲ್ಲರ್‌ ಜಾನರ್‌ನ ಸಿನಿಮಾ. ಚಿತ್ರದ ಒಂದು ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಒಟ್ಟು 60 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ. ಶೀಘ್ರದಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ ಅಭಿಷೇಕ್‌.

ADVERTISEMENT

ಹೆಚ್. ಕೆ ಪ್ರಕಾಶ್ ಅವರು ತಮ್ಮ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಸಾಧು ಕೋಕಿಲ, ಅಶ್ವಿನ್ ರಾವ್ ಪಲ್ಲಕ್ಕಿ ಮೊದಲಾದವರು ಚಿತ್ರದಲ್ಲಿದ್ದಾರೆ.‌

ನಿರ್ದೇಶಕ ಸತ್ಯಪ್ರಕಾಶ್‌ ಅವರು ನಿರ್ದೇಶಿಸಿ, ನಟಿಸುತ್ತಿರುವ ‘ಎಕ್ಸ್‌ ಆ್ಯಂಡ್‌ ವೈ’ ಚಿತ್ರಕ್ಕೂ ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.