ಮುಂಬೈ: ‘ಎಮರ್ಜೆನ್ಸಿ’ ಚಿತ್ರದಲ್ಲಿನ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿಯು ನೀಡಿರುವ ಸಲಹೆಗಳನ್ನು ಒಪ್ಪಿರುವುದಾಗಿ ಈ ಚಿತ್ರದ ಸಹ ನಿರ್ಮಾಪಕ ಕಂಪನಿ ಜೀ, ಶುಕ್ರವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಕಂಗನಾ ರನೌತ್ ನಟಿಸಿರುವ ‘ಎಮರ್ಜೆನ್ಸಿ’ ಚಿತ್ರವನ್ನು ರನೌತ್ ಅವರ ಚಿತ್ರ ನಿರ್ಮಾಣ ಕಂಪನಿ ಮಣಿಕರ್ಣಿಕಾ ಮತ್ತು ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಾಣ ಮಾಡಿವೆ. ಸೆನ್ಸಾರ್ ಮಂಡಳಿ ಸೂಚಿಸಿರುವ ವಿಷಯಗಳಿಗೆ ಕತ್ತರಿ ಹಾಕಲು ಒಪ್ಪಿರುವುದಾಗಿ ಈ ವಾರದ ಆರಂಭದಲ್ಲಿ ಮಣಿಕರ್ಣಿಕಾ ನ್ಯಾಯ ಪೀಠಕ್ಕೆ ತಿಳಿಸಿತ್ತು.
ಜೀ ಪ್ರತಿನಿಧಿಸಿದ ಹಿರಿಯ ವಕೀಲ ಶರಣ್ ಜಗ್ತಿಯಾನಿ, ಚಿತ್ರದಲ್ಲಿ ಅಗತ್ಯವಿರುವ ಕಡೆ ಕತ್ತರಿ ಹಾಕಿ, ಪ್ರಮಾಣಪತ್ರ ಪಡೆದುಕೊಳ್ಳಲು ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್ಸಿ) ಚಿತ್ರವನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಸಿಬಿಎಫ್ಸಿ ಪರ ವಾದಿಸಿದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್, ಸೂಚಿಸಿರುವ ಬದಲಾವಣೆಗಳನ್ನು ಮಾಡಿದ ನಂತರ ಚಿತ್ರವನ್ನು ಸಲ್ಲಿಸಿದರೆ, ಅದನ್ನು ಪರಿಶೀಲಿಸಲಾಗುವುದು, ಅಲ್ಲದೆ ಎರಡು ವಾರಗಳಲ್ಲಿ ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರು ಇರುವ ವಿಭಾಗೀಯ ಪೀಠವು, ಹೇಳಿಕೆಗಳನ್ನು ಸ್ವೀಕರಿಸಿ, ಜೀ ಎಂಟರ್ಟೈನ್ಮೆಂಟ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ. ನಂತರ ವಿಸ್ತೃತ ಆದೇಶ ಪ್ರಕಟಿಸುವುದಾಗಿಯೂ ವಿಭಾಗೀಯ ಪೀಠ ಹೇಳಿದೆ.
ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಸಿಬಿಎಫ್ಸಿ ಪ್ರಮಾಣಪತ್ರ ನೀಡಿರಲಿಲ್ಲ. ಸೆನ್ಸಾರ್ ಮಂಡಳಿ ವಿರುದ್ಧ ಚಿತ್ರ ತಂಡ ಕೋರ್ಟ್ ಮೊರೆ ಹೋಗಿತ್ತು. ಸೆನ್ಸಾರ್ ಮಂಡಳಿಯ ಪರಿಷ್ಕರಣೆ ಸಮಿತಿಯು ನಿರ್ಧರಿಸಿರುವಂತೆ, ಚಿತ್ರದಲ್ಲಿ ಕೆಲವೊಂದಕ್ಕೆ ಕತ್ತರಿ ಹಾಕಿದರೆ ಮಾತ್ರ ಚಿತ್ರ ಬಿಡುಗಡೆ ಮಾಡಬಹುದು ಎಂದು ಕಳೆದ ವಾರ ಸಿಬಿಎಫ್ಸಿ, ಬಾಂಬೆ ಹೈಕೋರ್ಟ್ಗೆ ತಿಳಿಸಿತ್ತು.
ಚಿತ್ರಕ್ಕೆ ಪ್ರಮಾಣಪತ್ರ ನೀಡುವಂತೆ ಸಿಬಿಎಫ್ಸಿಗೆ ನಿರ್ದೇಶನ ಕೋರಿ ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್,
ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.